ಮಡಿಕೇರಿ: ಯಶಸ್ವಿ ಮಹಿಳಾ ಸಂಘ ಮತ್ತು ಮಡಿಕೇರಿಯ ರಾಜರಾಜೇಶ್ವರಿ ಆಸ್ಪತ್ರೆಯ ಸಹಯೋಗದಲ್ಲಿ ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ವೈದ್ಯಕೀಯ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿತ್ತು.
ಕಾಲೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಉದ್ಘಾಟಿಸಿದರು.
ಪ್ರಕೃತಿ ವಿಕೋಪದಲ್ಲಿ ನಲುಗಿ ಹೋದ ಕಾಲೂರು ಜನರಿಗೆ ಸಂಘ– ಸಂಸ್ಥೆಗಳು ಹಲವು ರೀತಿಯಲ್ಲಿ ನೆರವಾಗಿದ್ದವು ಎಂದು ಸ್ಮರಿಸಿದರು.
ಸಂತ್ರಸ್ತ ಮಹಿಳೆಯರನ್ನು ತಪಾಸಣೆ ನಡೆಸಿ ಆರ್.ಆರ್. ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ರಾಜೇಶ್ವರಿ ನವೀನ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಜನರಿಗೂ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟುಕುವ ದರದಲ್ಲಿ ತಲುಪಿಸುವುದು ನಮ್ಮ ಆಶಯ ಎಂದು ಹೇಳಿದರು.
ಸಾಹಿತಿ ಡಾ.ನಯನ ಕಶ್ಯಪ್ ಅವರು, ಸಂಕಷ್ಟದಲ್ಲಿರುವವರಿಗೆ ಪರಸ್ಪರ ನೇರವಾಗಿವುದು ಮಾನವೀಯತೆಯ ಲಕ್ಷಣ. ಆ ಕೆಲಸ ನಮ್ಮಲ್ಲಿ ಸಹೃದಯತೆಯಿಂದ ಆಗಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಗಾಳಿಬೀಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಪೊನ್ನಪ್ಪ ಮಾತನಾಡಿದರು. 100ಕ್ಕೂ ಹೆಚ್ಚು ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಂಡರು.