ಗೋಣಿಕೊಪ್ಪಲು: ಪೊನ್ನಂಪೇಟೆ, ಗೋಣಿಕೊಪ್ಪಲು ಸುತ್ತಮುತ್ತ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
ಅರ್ಧ ಗಂಟೆಗೂ ಹೆಚ್ಚು ಸಮಯ ಬಿದ್ದ ರಭಸದ ಮಳೆಗೆ ಕಾಲುವೆ, ಚರಂಡಿ ಹಾಗೂ ರಸ್ತೆ ಮೇಲೆ ನೀರು ಹರಿಯಿತು. ಬೆಳಗ್ಗಿನಿಂದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ದಟ್ಟ ಮೋಡ ಕವಿದು ಸಂಜೆ 4ರ ವೇಳೆಗೆ ಗುಡುಗು ಸಹಿತ ಮಳೆ ಸುರಿಯಿತು.
ದಕ್ಷಿಣ ಕೊಡಗಿನ ಪೊನ್ನಂಪೇಟೆ, ಶ್ರೀಮಂಗಲ, ಗೋಣಿಕೊಪ್ಪಲು ಭಾಗಕ್ಕೆ ಮೇ ಮೊದಲ ವಾರದವರೆಗೂ ಮಳೆ ಬಿದ್ದಿರಲಿಲ್ಲ. ಇದರಿಂದ ಬಿಸಿಲಿನ ತಾಪ ಹೆಚ್ಚಿ ಕಾಫಿ ಹಾಗೂ ಕರಿಮೆಣಸಿನ ಬಳ್ಳಿಗಳೆಲ್ಲ ಸುಟ್ಟು ಹೋಗಿದ್ದವು. ನಾಲ್ಕೈದು ದಿನಗಳಿಂದ ಬೀಳುತ್ತಿರುವ ಉತ್ತಮ ಮಳೆಗೆ ಪರಿಸರದಲ್ಲಿ ಹಸಿರು ಕಾಣಿಸಿಕೊಂಡು ಕಂಗೊಳಿಸುತ್ತಿದೆ. ಕಾಫಿ ಗಿಡದಲ್ಲಿ ಅಳಿದುಳಿದ ಹೂಗಳು ಅರಳತೊಡಗಿವೆ.
‘ಮೇನಲ್ಲಿ ಕಾಫಿ ಹೂ ಅರಳುವುದು ಅಪರೂಪ. ಈ ಬಾರಿ ಮಳೆ ತಡವಾಗಿ ಬಿದ್ದುದರಿಂದ ಹೂ ಅರಳತೊಡಗಿದೆ. ಹಂತ ಹಂತವಾಗಿ ಕಾಫಿ ಹೂ ಅರಳಿರುವುದರಿಂದ ಮೂರು ಬಾರಿ ಕಾಫಿ ಕೊಯ್ಲು ಮಾಡಬೇಕಾಗಿದೆ’ ಎಂದು ಕೈಕೇರಿ ಕುಪ್ಪಂಡ ದತ್ತಾತ್ರೇಯ ಹೇಳಿದರು.
ಹುದಿಕೇರಿ, ಬಿರುನಾಣಿ, ಮಾಲ್ದಾರೆ, ಬಾಳೆಲೆ, ತಿತಿಮತಿ ಭಾಗಕ್ಕೂ ಉತ್ತಮ ಮಳೆಯಾಗಿದೆ. ನಾಗರಹೊಳೆ ಭಾಗಕ್ಕೂ ಉತ್ತಮ ಮಳೆ ಬಿದ್ದು ಗಿಡಮರಗಳೆಲ್ಲ ಚಿಗುರೊಡೆದು ಕಂಗೊಳಿಸುತ್ತಿವೆ.