ಮಡಿಕೇರಿ: ಕೊಡಗಿನ ವಿವಿಧೆಡೆ ಬುಧವಾರವೂ ಉತ್ತಮ ಮಳೆಯಾಗಿದೆ.
ಕುಶಾಲನಗರ, ಕೂಡಿಗೆ, 7ನೇ ಹೊಸಕೋಟೆ, ದುಬಾರೆ, ಸುಂಟಿಕೊಪ್ಪ, ವಿರಾಜಪೇಟೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಎದುರು ಮರದ ರೆಂಬೊಯೊಂದು ಹೆದ್ದಾರಿ ಮೇಲೆ ಬಿದ್ದು ಮಡಿಕೇರಿ– ಮೈಸೂರು ರಸ್ತೆಯಲ್ಲಿ ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮುಳ್ಳುಸೋಗೆಯ ಕೂಡ್ಲೂರು, ಸುಂದರನಗರ, ಚಿಕ್ಕತ್ತೂರು, ಹಾರಂಗಿ ಹಾಗೂ ಮಾರುಕಟ್ಟೆ ಪೈಸಾರಿಗಳಲ್ಲಿ ಹತ್ತಕ್ಕೂ ಹೆಚ್ಚು ಗುಡಿಸಲಿಗೆ ಹಾನಿಯಾಗಿದೆ. ಕುಶಾಲನಗರ ಭಾಗದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಕರಡಿಗೋಡು, ಚಟ್ಟಳ್ಳಿ, ಸಿದ್ದಾಪುರ ಭಾಗದಲ್ಲಿ ಸಾಧಾರಣ ಮಳೆಯಾದರೆ, ನಾಪೋಕ್ಲು ಹೋಬಳಿಯ ಹೊದ್ದೂರು, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಮಳೆ ತಂಪೆರೆಯಿತು.
ಮಡಿಕೇರಿ ಸುತ್ತಮುತ್ತ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿತ್ತು.