ಮಡಿಕೇರಿ: ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕೆ.ಎಸ್. ರಮೇಶ್ ಹೊಳ್ಳ ಅವರು ಬುಧವಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ರಮೇಶ್ ಹೊಳ್ಳ ಅವರು ಮಾತನಾಡಿ, ‘ಏಜೆಂಟರ ಹಸ್ತಕ್ಷೇಪ ಇಲ್ಲದೆ ನೇರವಾಗಿ ಕಚೇರಿ ಸಂಪರ್ಕಿಸಿ ಕೆಲಸ ಕಾರ್ಯ ಮಾಡಿಕೊಳ್ಳಿ. ಮಧ್ಯವರ್ತಿಗಳ ಅಗತ್ಯ ಇನ್ನು ಮುಂದೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವುದಿಲ್ಲ’ ಎಂದು ಹೇಳಿದರು.
‘ಮೂಡಾಕ್ಕೆ ಸ್ವಂತ ಕಚೇರಿಯನ್ನೂ ನನ್ನ ಅಧಿಕಾರವಧಿಯಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗುತ್ತದೆ. ಕಡತಗಳನ್ನು ವಿಳಂಬ ರಹಿತವಾಗಿ ವಿಲೇವಾರಿ ಮಾಡಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ಹಿರಿಯ ವೈದ್ಯರಾದ ಡಾ.ಎಂ.ಜಿ.ಪಾಟ್ಕರ್, ಪ್ರಮುಖರಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ಬೆಪ್ಪೂರನ ಮೇದಪ್ಪ, ರವೀಂದ್ರ ರೈ, ಕೆ.ಎಸ್. ದೇವಯ್ಯ, ಮಡಿಕೇರಿ ನಗರಾಭಿವೃದ್ಧಿ ಆಯುಕ್ತ ಶೇಷು ಅವರು ಶುಭ ಹಾರೈಸಿದರು.
3 ವರ್ಷ ಕಾಲ ರಮೇಶ್ ಹೊಳ್ಳ ಅವರು ಮೂಡಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೊದಲು ಮಡಿಕೇರಿಯ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಹೊಳ್ಳ ಅವರು ಕಾರ್ಯನಿರ್ವಹಿಸಿದ್ದರು.