ಕುಶಾಲನಗರ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವರ್ಷದಲ್ಲಿ 70 ಬೈಕ್ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 14 ಮಂದಿ ಪ್ರಾಣ ಕಳೆದುಕೊಡಿದ್ದಾರೆ ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಂಚಾರ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಸಿಹಿ, ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕುಶಾಲನಗರ ಮಾರ್ಗವಾಗಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಧಿಕವಾಗಿದ್ದು, ಕಾನೂನು ಹಾಗೂ ಸಂಚಾರ ನಿಯಮಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಹೆಲ್ಮೆಟ್ ಧರಿಸದ ಕಾರಣ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ವರ್ಷದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 56 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಪಿಸಿಐ ಬಿ.ಎಸ್.ದಿನೇಶ್ ಕುಮಾರ್ ಮಾತನಾಡಿ, ‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅತಿವೇಗ ಅಪಘಾತಕ್ಕೆ ಕಾರಣ. ರಸ್ತೆ ನಿಯಮ ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಸಂಚಾರ ಪೊಲೀಸ್ ಠಾಣಾಧಿಕಾರಿ ಪಿ.ಪಿ.ಸೋಮೇಗೌಡ ನೇತೃತ್ವದಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಯು ಕಾರ್ಯಪ್ಪ ವೃತ್ತ, ಮಾದಾಪಟ್ಟಣ ಎಂಜಿನಿಯರಿಂಗ್ ಕಾಲೇಜು, ಟೋಲ್ಗೇಟ್, ಗುಮ್ಮನಕೊಲ್ಲಿ ಸರ್ಕಲ್, ಮಾರುಕಟ್ಟೆ ರಸ್ತೆ ಮತ್ತಿತರ ಕಡೆಗಳಲ್ಲಿ ಹೆಲ್ಮೆಟ್ ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಎಎಸ್ಐ ಎಂ.ಸಿ.ಮೋಹನ್ ಕುಮಾರ್, ಮುಖ್ಯಪೇದೆ ಎಂ.ವಿ.ಸಹದೇವ್, ಆಶಾ ಸುರೇಶ್, ಸಿಬ್ಬಂದಿಯಾದ ಚಂದ್ರು, ರಮೇಶ್, ಎಚ್.ಬಿ.ಶಶಿಕುಮಾರ್, ಕೆ.ಸಿ.ಕೀರ್ತಿ, ಚಂಗಪ್ಪ, ಸಾಜಿ, ಜೋಸೆಫ್ ಪಾಲ್ಗೊಂಡಿದ್ದರು.