ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆ ಸುರಿದಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನದಿ ತೀರ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಸುಂಟಿಕೊಪ್ಪ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಬತ್ತ ಬೆಳೆಯುವ ರೈತರು ಕೃಷಿ ಚಟುವಟಿಕೆಯನ್ನು ಮುಂದುವರಿಸಿದ್ದಾರೆ.
ಮಡಿಕೇರಿಯಲ್ಲೂ ಬುಧವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಆರಂಭವಾದ ಮಳೆ ದಿನವಿಡೀ ಮುಂದುವರಿದಿದೆ.
ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆ ಅಂತ್ಯಗೊಂಡಂತೆ 24 ಗಂಟೆಯಲ್ಲಿ 34.82 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 1.50 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1571.49 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 713.62 ಮಿ.ಮೀ. ಮಳೆ ದಾಖಲಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ 46.55ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 24.7 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 33.2 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 49.2 ಮಿ.ಮೀ., ನಾಪೋಕ್ಲು 39.4 ಮಿ.ಮೀ., ಸಂಪಾಜೆ 37.4 ಮಿ.ಮೀ., ಭಾಗಮಂಡಲ 60.2 ಮಿ.ಮೀ., ವೀರಾಜಪೇಟೆ ಕಸಬಾ 36.6 ಮಿ.ಮೀ., ಹುದಿಕೇರಿ 38 ಮಿ.ಮೀ., ಶ್ರಿಮಂಗಲ 35.6 ಮಿ.ಮೀ., ಪೊನ್ನಂಪೇಟೆ 13 ಮಿ.ಮೀ., ಅಮ್ಮತ್ತಿ 16 ಮಿ.ಮೀ., ಬಾಳಲೆ 9 ಮಿ.ಮೀ., ಸೋಮವಾರಪೇಟೆ ಕಸಬಾ 41.2 ಮಿ.ಮೀ., ಶನಿವಾರಸಂತೆ 21.6 ಮಿ.ಮೀ., ಶಾಂತಳ್ಳಿ 77.4 ಮಿ.ಮೀ., ಕೊಡ್ಲಿಪೇಟೆ 13 ಮಿ.ಮೀ., ಕುಶಾಲನಗರ 10 ಮಿ.ಮೀ., ಸುಂಟಿಕೊಪ್ಪ 36 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.65 ಅಡಿಗಳು, ಕಳೆದ ವರ್ಷ ಇದೇ ದಿನ 2827.29 ಅಡಿ ನೀರು ಸಂಗ್ರಹವಾಗಿತ್ತು.
ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 14.6ಮಿ.ಮೀ. ಮಳೆಯಾಗಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 7533 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 409 ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 5062 ಕ್ಯೂಸೆಕ್, ನಾಲೆಗೆ 850 ಕ್ಯೂಸೆಕ್ ಆಗಿದೆ.
ಮಳೆ: ಮನೆ ಕುಸಿತ
ಸೋಮವಾರಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು ಮಂಗಳವಾರ ರಾತ್ರಿ ಮಳೆ ಗಾಳಿಗೆ ಮೂರು ಮನೆಗಳಿಗೆ ಹಾನಿಯಾಗಿದೆ.
ನಗರದ ಬಸವೇಶ್ವರ ರಸ್ತೆ ನಿವಾಸಿ ಶೋಭಾ ಶಿವರಾಜ್ ಎಂಬವರ ಮನೆಯ ಹಿಂಬದಿಯ ಗೋಡೆ ಭಾಗಶಃ ಕುಸಿದಿದ್ದು ರೂ 50 ಸಾವಿರ ನಷ್ಟವಾಗಿದೆ.
ಹಾನಗಲ್ಲು ಗ್ರಾಮದ ಎಚ್.ಪಿ. ಚನ್ನಪ್ಪ ಅವರ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದು ರೂ 20 ಸಾವಿರ ನಷ್ಟವಾಗಿದೆ. ಗೌಡಳ್ಳಿ ಗ್ರಾಮದ ಜಗದೀಶ್ ಎಂಬವರ ವಾಸದ ಮನೆಯು ಕುಸಿದು ರೂ 10 ಸಾವಿರ ನಷ್ಟವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಲ್ಕುನಾಡು ನಾಟಿ ಬಿರುಸು
ನಾಪೋಕ್ಲು: ಪಟ್ಟಣ ಹಾಗೂ ನಾಲ್ಕುನಾಡು ವ್ಯಾಪ್ತಿಯಲ್ಲಿ ಬುಧವಾರ ಬಹುತೇಕ ಭಾಗ ಬಿಸಿಲಿನಿಂದ ಕೂಡಿದ್ದು ಆಗೊಮ್ಮೆ ಈಗೊಮ್ಮೆ ಮಳೆ ಸುರಿಯಿತು.
ಬತ್ತದ ಗದ್ದೆಗಳಲ್ಲಿ ನಾಟಿ ಕೆಲಸ ಆರಂಭಗೊಂಡಿದೆ. ಬಹುತೇಕ ಭಾಗಗಳಲ್ಲಿ ಗದ್ದೆಯ ಕೆಲಸಕ್ಕೆ ಕಾರ್ಮಿಕರ ಕೊರತೆ ಕಾಡುತ್ತಿದೆ. ಹಿಂದಿನ ವರ್ಷಗಳಲ್ಲಿ ಬಿ.ಟಿ. ಹಾಗೂ ಇಂಟಾನ್ ತಳಿಗಳನ್ನು ಬೆಳೆದಿದ್ದು ಈ ಬಾರಿ ತುಂಗಾ ತಳಿಯ ಬತ್ತವನ್ನು ನಾಟಿ ಮಾಡುತ್ತಿರುವುದಾಗಿ ನೆಲಜಿ ಗ್ರಾಮದ ರೈತ ಅಪ್ಪುಮಣಿಯಂಡ ರಘುಸುಬ್ಬಯ್ಯ ತಿಳಿಸಿದರು.
ನಾಟಿ ಕೆಲಸಕ್ಕೆ ಕಾರ್ಮಿಕರ ಕೊರತೆ ಇದೆ. ದಿನಕ್ಕೆ ರೂ 250 ಕೂಲಿ ನೀಡಬೇಕಾಗಿದೆ. ನಾಪೋಕ್ಲು ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಸಕಾಲದಲ್ಲಿ ಮಾರ್ಗದರ್ಶನ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ ಇದೆ ಎಂದು ಅವರು ನುಡಿದರು. ಕಾರ್ಮಿಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಬತ್ತ ಬೆಳೆಯುವ ಗದ್ದೆಗಳ ಪ್ರಮಾಣ ಕಡಿಮೆಯಾಗುತ್ತಿದೆ. ಬತ್ತದ ಗದ್ದೆಗಳಲ್ಲಿ ಶುಂಠಿಯ ಮಡಿಗಳು, ಬಾಳೆಯ ಗಿಡಗಳು ತಲೆ ಎತ್ತುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.