ಗೋಣಿಕೊಪ್ಪಲು:`ಬಂದೀರೆ ಬೆಂದ್ಕೆಲ್ಲಾ, ನಿಂಗೆಲ್ಲ ಚಾಯಿತ್ತ್ ಉಳ್ಳೀರೆಲ್ಲ~ ಎಂಬ ಹಾಡಿಗೆ ಕಿರುಗೂರು ಕುಟ್ಟಿಚಾತ ಯುವತಿ ಮಂಡಳಿಯ ಉಮ್ಮತ್ತಾಟ್ ನೃತ್ಯ ಬುಧವಾರ ರಾತ್ರಿ ಇಲ್ಲಿನ ದಸರಾ ಸಾಂಸ್ಕೃತಿಕ ಕಾಯಕ್ರಮದಲ್ಲಿ ಮುದ ನೀಡಿತು.
ಕೊಡಗಿನ ಪ್ರಸಿದ್ಧ ಉಮ್ಮತ್ತಾಟ್ ನೃತ್ಯವನ್ನು ಕೆಲವು ಆಧುನಿಕತೆಯ ಸ್ಪರ್ಷದೊಂದಿಗೆ ಆಕರ್ಷಕವಾಗಿ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಗೋವಾ ಉತ್ಸವ, ಹಂಪಿ ಉತ್ಸವ, ಮಂಗಳೂರಿನ ತುಳು ಉತ್ಸವ, ಚಿತ್ರದುರ್ಗದ ಲಂಬಾಣಿ ಸಮಾವೇಶ, ಬೆಂಗಳೂರಿನ ರಾಜ್ಯೋತ್ಸವ, ಮೈಸೂರಿನ ಕೊಡಗು ಉತ್ಸವ, ಮಂಡ್ಯ ಮುಂತಾದ ಕಡೆ ಕಾರ್ಯಕ್ರಮ ನೀಡಿರುವ ಈ ತಂಡ ಕೊಡಗಿನ ಸಾಂಸ್ಕೃತಿಕ ಇತಿಹಾಸವನ್ನು ಎತ್ತಿಹಿಡಿಯಿತು.
ನೃತ್ಯದಲ್ಲಿ ಪಾಲ್ಗೊಂಡಿದ್ದ ಕೊರಕುಟ್ಟೀರ ಮೀನಾ ಚಂಗಪ್ಪ, ಪೊಕ್ಕಳಿಚಂಡ ಪಿ.ಜಾನಕಿ, ಚಾರಿಮಂಡ ಭಾಗ್ಯ, ಚಾರಿಮಂಡ ವನಿತಾ, ಪೊಕ್ಕಳಿಚಂಡ ವಾಣಿ, ಪೊಕ್ಕಳಿಚಂಡ ಚೋಂದಮ್ಮ, ಪೊಕ್ಕಳಿಚಂಡ ಉಷಾ, ಪೊಕ್ಕಳಿಚಂಡ ಚೈತ್ರಾ, ಕೊರಕುಟ್ಟೀರ ವಿನ್ಸಿ, ಕೊರಕುಟ್ಟೀರ ಪ್ರಿನ್ಸಿ, ಕಾಕೇರ ನಿತ್ಯಾ, ಪಾಣಿಕುಟ್ಟೀರ ರೂಪಾ, ಕೊರಕುಟ್ಟೀರ ಮಾಲಾ, ಕಾಕೇರ ಪುಷ್ಪ, ಪೊಕ್ಕಳಿಚಂಡ ಚೈತ್ರಾ, ಪೊಕ್ಕಳಿಚಂಡ ಕವನ ಉತ್ತಮವಾಗಿ ನೃತ್ಯ ಮಾಡಿದರು. ತಂಡದ ನಾಯಕರಾಗಿ ಕೊರಕುಟ್ಟೀರ ಸರ ಚಂಗಪ್ಪ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಡೆದ ಜನಪದ ಸಂಗೀತ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಗಾಯಕರಾದ ಕೆ.ಚಂದ್ರಶೇಖರ್, ಅರಸಿಕೆರೆ ಸ್ವಾಮಿ ಹಾಗೂ ಕೆ.ಸಿ.ಭೂಮಿಕಾ ಉತ್ತಮವಾಗಿ ಹಾಡಿ ಎಲ್ಲರ ಮೆಚ್ಚುಗೆ ಪಡೆದರು.
ಮುಂಜಾನೆದ್ದು ಕುಂಬಾರಣ್ಣ, ಮಲೆಯಾ ಮಹಾದೇವ, ಎಲ್ಲೋ ಜೋಗಪ್ಪ ನಿನ್ನರಮನೆ ಮುಂತಾದ ಹಾಡುಗಳು ಪ್ರೇಕ್ಷಕರ ಮನರಂಜಿಸಿದವು. ಬಳಿಕ ನಡೆದ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಮಾ. ಮುಕೇಶ್ ನುಡಿಸಿದ ವೈಲಿನ್ ವಾದನ ಮುದ ನೀಡಿತು.
ಗೋಣಿಕೊಪ್ಪಲಿನ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಸಭಿಕರನ್ನು ಹುಚ್ಚೆಬ್ಬಿಸಿತು. ಕನ್ನಡ, ಇಂಗ್ಲಿಷ್, ಹಿಂದಿನ, ತಮಿಳು, ಮಲೆಯಾಳ ಮುಂತಾದ ಗೀತೆಗಳಿಗೆ ನೃತ್ಯಪಟುಗಳು ಕುಣಿದು ಕುಪ್ಪಳಿಸಿದರು.
ವೇದಿಕೆಯಲ್ಲಿದ್ದ ನೃತ್ಯ ಪಟುಗಳ ಹಾಡು ಕುಣಿತಕ್ಕೆ ಪ್ರೇಕ್ಷಕರು ಕೂಡ ಸಾಥ್ ನೀಡಿದರು. 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಭಾಂಗಣದ ತುಂಬ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಮಧ್ಯರಾತ್ರಿ 12 ಗಂಟೆವರೆಗೆ ಕಾರ್ಯಕ್ರಮದ ಸವಿ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.