ಮಡಿಕೇರಿ: ‘ಪ್ರತಿ ಮಗುವೂ ಶ್ರೇಷ್ಠ ಕಲಾವಿದ; ಕಲೆ ಎಂಬುದು ರಕ್ತಗತವಾಗಿ ಬಂದಿರುವುದಿಲ್ಲ. ಸತತ ಅಭ್ಯಾಸದಿಂದ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ’ ಎಂದು ಬೆಳ್ಳಾರೆ ಶಿವರಾಮ ಕಾರಂತ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಡೆದ ಮಕ್ಕಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಅಡಗಿದೆ. ಇದನ್ನು ಗುರುತಿಸಿ ಪ್ರೋತ್ಸಾಹಿ ಸುವುದು ಅತ್ಯಗತ್ಯ. ಶೇ 80ರಷ್ಟು ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಇರುತ್ತದೆ. ಆಸಕ್ತಿಯನ್ನು ಉತ್ತೇಜಿಸಿ’ ಎಂದು ಕರೆ ನೀಡಿದರು.
ಆಧುನಿಕ ಜಗತ್ತು ಪರಿಸರ ಹಾಗೂ ಹಸಿರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಆದ್ದರಿಂದ, ಮಣ್ಣಿನ ಸೊಬಗನ್ನು ಮಕ್ಕ ಳಿಗೆ ಪರಿಚಯಿಸಿ ಎಂದು ನರೇಂದ್ರ ರೈ ದೇರ್ಲ ಹೇಳಿದರು.
ಚಿತ್ರಕಲಾ ಪ್ರದರ್ಶನ ಆಯೋಜಕ ಪ್ರಸನ್ನ ಮಾತನಾಡಿ, ಮಕ್ಕಳ ಚಿತ್ರಗಳು ಅಮೂಲ್ಯವಾದವು; ಚಿತ್ರಕಲೆ ಮಕ್ಕಳ ಮಾನಸಿಕ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಮಕ್ಕಳನ್ನು ಮನೆಪಾಠ ಎಂಬ ನರಕಕ್ಕೆ ಹಾಕದೇ ಅವರ ಇಚ್ಛೆಯಂತೆ ಬದುಕಲು ಬಿಡಿ. ಪೋಷಕರು ಹಾಗೂ ಮಕ್ಕಳ ಬಾಂಧವ್ಯ ಉತ್ತಮವಾಗಿರಬೇಕು ಎಂದು ಹೇಳಿದರು.