ವೇಮಗಲ್: ಹೋಬಳಿಯ ಸೋಮಾಂಬುಧಿ ಅಗ್ರಹಾರ ಗ್ರಾಮದಲ್ಲಿ ಐತಿಹಾಸಿಕ ಕರಗ ಮಹೋತ್ಸವವು ಸೋಮವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.
ಕರಗದ ಪೂಜಾರಿ ಜಗದೀಶ್ ಅವರು ಕರಗ ಹೊತ್ತು ದೇವಾಲಯದಿಂದ ಹೊರ ಬರುತ್ತಿದ್ದಂತೆ ಜನರು ಗೋವಿಂದಾ ನಾಮಸ್ಮರಣೆ ಮಾಡಿದರು.
ನಂತರ ಕರಗವು ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿತು. ವೇದಿಕೆಯಲ್ಲಿ ಭಜಂತ್ರಿಗಳು ಹಾಗೂ ಕರಗದ ಪೂಜಾರಿಯು ತಮಟೆ ವಾದ್ಯಕ್ಕೆ ತಕ್ಕಂತೆ ಭಕ್ತಿಪೂರ್ವಕವಾಗಿ ನರ್ತಿಸಿ ಜನರನ್ನು ರಂಜಿಸಿದರು. ಹೂವಿನ ಕರಗ ಸಾಗಿದ ರಸ್ತೆಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಮನೆಗಳ ಮುಂದೆ ಕರಗ ಬಂದಾಗ ಮಹಿಳೆಯರು ಪೂಜೆ ಸಲ್ಲಿಸಿ ಹರಕೆ ತಿರಿಸಿದರು.
ಮಂಗಳವಾರ ಸಂಜೆ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿದ ನಂತರ ಕರಗದ ಪೂಜಾರಿ ಜಗದೀಶ್ ಅಗ್ನಿಕುಂಡ ಪ್ರವೇಶ ಮಾಡಿ ಭಕ್ತಿ ಪೂರ್ವಕವಾಗಿ ಕರಗ ಇಳಿಸಿದರು. ಶಾಸಕ ಕೆ.ಆರ್.ರಮೇಶ್ಕುಮಾರ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್ ಪಾಲ್ಗೊಂಡರು.