ಕೋಲಾರ: ಜಿಲ್ಲಾಡಳಿತದಿಂದ ನಗರದಲ್ಲಿ ಭಾನುವಾರ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆ ಮುಕ್ತಾಯದ ಸಂದರ್ಭದಲ್ಲಿ ಡಿಜೆ ಬಳಸಲು ಅವಕಾಶ ನೀಡದ ಕಾರಣ ಯುವಕರ ಮತ್ತು ಮುಖಂಡರ ನಡುವೆ ವಗ್ವಾದ ನಡೆದು, ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ನಗರದ ಕಾಲೇಜು ವೃತ್ತದಿಂದ ಆರಂಭವಾದ ಮೆರವಣಿಗೆ ಟಿ.ಚನ್ನಯ್ಯ ರಂಗಮಂದಿರದ ಬಳಿ ಕೊನೆಗೊಂಡಿತ್ತು. ಮಧ್ಯಾಹ್ನ 2ಕ್ಕೆ ನಿಗಧಿಯಾಗಿದ್ದ ವೇದಿಕೆ ಕಾರ್ಯಕ್ರಮ ತಡವಾಗಿ ಆರಂಭವಾಯಿತು. ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಬಂದ ಯುವಕರು ರಂಗಮಂದಿರದ ಆವರಣದಲ್ಲಿ ಡಿಜೆ ಹಾಕಿದ್ದರು.
ಡಿಜೆ ಇಲ್ಲಿನ ಹಾಕುವುದು ಬೇಡ ಎಂದು ಪೊಲೀಸರು ತಿಳಿಸಿದಾಗ ಕುಡಿದ ಮತ್ತಿನಲ್ಲಿದ್ದ ಯುವಕರಿಬ್ಬರು ಪೊಲೀಸರೊಂದಿಗೆ ಮಾತಿನಚಕಮಕಿ ನಡೆಸಿದರು. ವೇದಿಕೆಯ ಮೇಲಿದ್ದ ಸಮುದಾಯದ ಮುಖಂಡರು ಸ್ಥಳಕ್ಕೆ ಬಂದು ಯುವಕರನ್ನು ರಂಗಮಂದಿರಿಂದ ಹೊರಹಾಕಿದರು.
ಇದರಿಂದ ಯುವಕರು ನಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸಮುದಾಯದ ಮುಖಂಡರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಪೊಲೀಸರು ಯುವಕರನ್ನು ಮನವೊಲಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.