ಕೆಜಿಎಫ್: ಬೆಮಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಅದರಲ್ಲಿಯೂ ನಾಟಕ ಪ್ರದರ್ಶನದಲ್ಲಿ ಅವರದ್ದು ಎತ್ತಿದ ಕೈ ಎಂದು ರಂಗ ಕಲಾವಿದ ಕೃಷ್ಣ ಹೇಳಿದರು.
ಬೆಮಲ್ ಕನ್ನಡ ಮಿತ್ರರು ಸಂಸ್ಥೆ ಬುಧವಾರ ಏರ್ಪಡಿಸಿದ್ದ ಮೂರನೇ ದಿನದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಂಗ ಕಲೆ ತಿಳಿಯದವರು ಕೂಡ ಸಹ ಕಾರ್ಮಿಕರ ಜತೆಗೂಡಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಹಲವಾರು ನಾಟಕೋತ್ಸವಗಳಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದರು.
ಬೆಮಲ್ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾರ್ಮಿಕ ಸಂಘದ ಅಧ್ಯಕ್ಷ ತಿರುನಾವುಕರಸು ಮಾತನಾಡಿ, ಕನ್ನಡ ಮಾತನಾಡುವುದರಲ್ಲಿಯೇ ಒಂದು ಸೊಗಸಿದೆ. ಕಲಿಯವವರಿಗೂ ಒಂದು ಆಸಕ್ತಿ ಮೂಡಿಸುವ ಭಾಷೆಯಾಗಿದೆ. ಬೆಮಲ್ ಕಾರ್ಖಾನೆಯಲ್ಲಿರುವ ಕಾರ್ಮಿಕ ರಂಗ ಕಲಾವಿದರಿಂದ ಎಷ್ಟೋ ಜನ ಭಾಷೆ ಕಲಿತಿದ್ದಾರೆ. ನಾಟಕಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ರೈಲ್ ಕೋಚ್ ವಿಭಾಗದ ಮುಖ್ಯಸ್ಥ ಮನೋಹರ್ ಮೋಟಗಿ, ಕೆಜಿಎಫ್ ಸಂಕೀರ್ಣದ ಮುಖ್ಯಸ್ಥ ಈಶ್ವರ ಭಟ್, ಸಂಘದ ಉಪಾಧ್ಯಕ್ಷ ಎಂ.ವಿ.ಗೋಪಾಲ್ ಮಾತನಾಡಿದರು. ಲಚ್ಚಿ ಧಾರವಾಹಿಯಲ್ಲಿ ನಟಿಸುತ್ತಿರುವ ಕೆ.ಕೆ.ಸಾಂಘವಿ ಅವರನ್ನು ಸನ್ಮಾನಿಸಲಾಯಿತು. ಗಿಚ್ಚಿ ಗಿಲಿ ಗಿಲಿ ಕಲಾವಿದರಿಂದ ಹಾಸ್ಯೋತ್ಸವ ಕಾರ್ಯಕ್ರಮ ನಡೆಯಿತು.