ಗುರುವಾರ , ಮಾರ್ಚ್ 23, 2023
30 °C

ಭ್ರಷ್ಟಾಚಾರವೇ ಬಿಜೆಪಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ರ‍್ಯಾಲಿ ಹಾಗೂ ಎತ್ತಿನಗಾಡಿಯ ಮೆರವಣಿಗೆ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಛೇದಿನ ಬರಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಸಾಮಾನ್ಯ ಜನರು ಜೀವನ ದುಸ್ತರವಾಗಿದೆ ಎಂದು ದೂರಿದರು.

ಬಿಜೆಪಿಯ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡುಭ್ರಷ್ಟರಾಗಿದ್ದಾರೆ. ಅವರ ಮಗ ವಿಜಯೇಂದ್ರ ಖಜಾನೆಯನ್ನೇ ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕರೇ ಹೇಳಿರುವಾಗ ಅವರ ಕಾರ್ಯವೈಖರಿಗೆ ಕನ್ನಡಿ ಬೇಕೇ, ಬಿಜೆಪಿ ಸರ್ಕಾರ ಲೂಟಿ ನಡೆಸುತ್ತಿದೆ ಎಂದು ಆರೋಪಿಸಿದರು.

ಪ್ರಭಾವಿ ಸಚಿವ ಯೋಗೇಶ್ವರ್ ಅವರು ನಮ್ಮ ಸರ್ಕಾರ ನಮ್ಮ ಕೈಯಲಿಲ್ಲ. ಈ ಸರ್ಕಾರ ಮೂರು ಪಕ್ಷದ ಸರ್ಕಾರ ಎಂದು ಹೇಳಿದ್ದಾರೆ. ಇದನ್ನು ಅವಲೋಕಿಸಿದರೆ ಆಡಳಿತ ನಡೆಸುವ ನೈತಿಕತೆ ಬಿಜೆಪಿಗಿಲ್ಲ ಎಂದು ಟೀಕಿಸಿದರು.

ರೈತರ ಖಾತೆಗೆ ₹ 10 ಸಾವಿರ ಜಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅದು ಗೊಬ್ಬರಕ್ಕೂ ಸಾಕಾಗುವುದಿಲ್ಲ. ಒಂದು ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲು ₹ 2 ಲಕ್ಷ ಬೇಕು. ಎಕರೆಗೆ ಕನಿಷ್ಠ 1 ಲಕ್ಷವಾದರೂ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ₹ 150-200 ಇದ್ದ ಸಿಮೆಂಟ್ ಚೀಲ ಈಗ ₹ 450ಕ್ಕೆ ತಲುಪಿದೆ. ₹ 30 ಇದ್ದ ಒಂದು ಕೆ.ಜಿ ಸ್ಟೀಲ್ ಈಗ ₹ 70ಕ್ಕೆ ಏರಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗ, ಬಡವರು ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕೊರೊನಾ ಸೋಂಕು ತಡೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿಲ್ಲ. ಬದಲಾಗಿ ಕೋವಿಡ್ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಉಸ್ತುವಾರಿ ಮಲ್ಲಾಜಮ್ಮ, ಕಂಚೇಗೌಡ, ಎಂಎಲ್‌ಸಿ ಗೋವಿಂದರಾಜು, ಬಲರಾಮು, ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ಉಪಾಧ್ಯಕ್ಷೆ ಪೊನ್ನಿ ರಮೇಶ್, ದೇಶಹಳ್ಳಿ ವೆಂಕಟರಾಮ್, ವೇದಾವತಿ ಪ್ರಭಾಕರ್, ಬೂದಿಕೋಟೆ ನಾಗರಾಜ್, ಪಾರ್ಥಸಾರಥಿ, ಎಚ್.ಕೆ. ನಾರಾಯಣಸ್ವಾಮಿ, ಆರ್.ವಿ. ಸುರೇಶ್, ರಣಜಿತ್‌ ಕುಮಾರ್, ಪುರಸಭೆ ಸದಸ್ಯರು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು