ಮಾಲೂರು: ಬಗರ್ ಹುಕಂ ಸಾಗುವಳಿ ಹಕ್ಕು ಪತ್ರಗಳಿಗಾಗಿ ಪಿ ನಂಬರ್ ತಿದ್ದುಪಡಿ, ನಿವೇಶನ ರಹಿತ ರೈತರಿಗೆ ನಿವೇಶನ ಈಡೇರಿಸುವಂತೆ ಒತ್ತಾಯಿಸಿ ಹಾಗೂ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ನಡೆಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮುನಿಸ್ವಾಮಿಗೌಡ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಲೋಕಸಭೆಯಲ್ಲಿ ಚರ್ಚಿಸದೆ ಜಾರಿಗೆ ತರಲುಸುಗ್ರೀವಾಜ್ಞೆ ತಂದಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನಸೋ ಇಚ್ಚೆ ಕಾಯ್ದೆಯನ್ನು ಜಾರಿಗೆ ಮಾಡಲು ಹೊರಟಿದೆ. ಈ ಕಾಯ್ದೆಗಳಿಂದ ರೈತಾಪಿ ವರ್ಗಕ್ಕೆ ಭಾರಿ ಹಾನಿಯುಂಟು ಮಾಡುವುದರಿಂದ ರೈತರು ಈ ಕಾಯ್ದೆಯಿಂದ ಸಮಾಧಿಯಾಗುವುದು ಶತಸಿದ್ದ. ಕೇಂದ್ರ ಸರ್ಕಾರದ ವಿರುದ್ಧ ಹಗಲು ರಾತ್ರಿ ಎನ್ನದೆ ಲಕ್ಷಾಂತರ ರೈತರು ಈ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೊರಾಟದಿಂದ ನೂರಾರು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಘಟಕರಾದ ವೆಂಕಟಪ್ಪ, ಚಲಪತಿ, ರಾಜಪ್ಪ, ವೆಂಕಟೇಶ್, ಸಿಂಹರಾಜು, ಚಂದ್ರು ಹಾಜರಿದ್ದರು.