ಬೇತಮಂಗಲ: ‘ಜಿ.ಪಂ. ಸದಸ್ಯರಾಗಿ ನಿರ್ಮಲಾ ಅಮರೇಶ್ ಕೆಲಸ ಮಾಡಿದ್ದಾರೆ. ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂಬುವುದನ್ನು ಅರಿತು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಹೇಳಿಕೆ ನೀಡಬೇಕು’ ಎಂದು ಬಿಜೆಪಿ ಮುಖಂಡ ಶ್ರೀರಾಮ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರ್ಮಲಾ ಅಮರೇಶ್ ಅವರು ಗ್ರಾಮಾಂತರ ಘಟಕದ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ. ಬಂಡವಾಳ ಏನು ಎಂಬುವುದರ ಬಗ್ಗೆ ಸಾಬೀತುಪಡಿಸುತ್ತೇನೆ ಎಂದಿದ್ದಾರೆ. ಅನಾವಶ್ಯಕವಾಗಿ ಜಯಪ್ರಕಾಶ್ ನಾಯ್ಡು ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕುರುಬ ಸಮುದಾಯದವರಿಗೆ ರಾಜಕೀಯ ಜ್ಞಾನ ಇಲ್ಲ ಎಂದು ಹೇಳಿಕೆ ನೀಡುವುದು ಖಂಡನೀಯ’ ಎಂದರು.
ಕನಕ ಜಯಂತಿ ಹೆಸರಿನಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಸಮುದಾಯದ ಮುಖಂಡರ ಬಳಿ ದೇಣಿಗೆ ಸಂಗ್ರಹಿಸಿದ್ದಾರೆ. ಹೇಳಿಕೆ ನೀಡುವುದನ್ನು ಸ್ಥಗಿತಗೊಳಿಸದಿದ್ದರೆ ಅವರ ರಾಜಕೀಯ ಬಂಡವಾಳವನ್ನು ಬಯಲು ಮಾಡುತ್ತೇವೆ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಸೀತಂಪಲ್ಲಿ ಬಾಬು, ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಆನಂದ್ ಗೌಡ, ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ್, ಮುಖಂಡರಾದ ಕೇಶವ ಗೌಡ, ಮುಕುಂದಪ್ಪ ಇದ್ದರು.