ಕೋಲಾರ: ‘ಕೋವಿಡ್ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಶೀಘ್ರದಲ್ಲೇ ಶಾಲೆಗಳು ಆರಂಭವಾಗುವ ವಿಶ್ವಾಸವಿದೆ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.
ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಮಂಗಳವಾರ ಆಹಾರ ಧಾನ್ಯ ವಿತರಿಸಿ ಮಾತನಾಡಿ, ‘ಕೊರೊನಾ ಸೋಂಕಿನ ಭಯದಿಂದ ಶಾಲೆಗಳು ಮುಚ್ಚಿದ ಕಾರಣ ಮಕ್ಕಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮರುಸೃಷ್ಟಿಸುವ ಅಗತ್ಯವಿದೆ’ ಎಂದು ತಿಳಿಸಿದರು.
‘ಕೋವಿಡ್ ಮಹಾಮಾರಿ ಜನರಿಗೆ ಸಂಕಷ್ಟ ತಂದೊಡ್ಡಿದೆ. ಜನರು ಆತ್ಮಸ್ಥೈರ್ಯರಿಂದ ಕೋವಿಡ್ ವಿರುದ್ಧ ಹೋರಾಟ ನಡೆಸಿ ಗೆಲುವು ಸಾಧಿಸಬೇಕು. ಸದ್ಯ ಸೋಂಕು ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಮಕ್ಕಳು ಮತ್ತೆ ಶಾಲೆಗೆ ಬರುವ ವಾತಾವರಣ ನಿರ್ಮಾಣವಾಗಲಿದೆ’ ಎಂದು ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
‘18 ವರ್ಷ ದಾಟಿದ ಪ್ರತಿಯೊಬ್ಬರಿಗೂ ಸರ್ಕಾರದಿಂದ ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಮಕ್ಕಳಿಗೂ ಲಸಿಕೆ ನೀಡುವಂತಾದರೆ ಶಾಲೆಗಳನ್ನು ನಿರಾಳವಾಗಿ ನಡೆಸಬಹುದು. ಜತೆಗೆ ಪೋಷಕರ ಆತಂಕ ನಿವಾರಣೆಯಾಗಲಿದ್ದು, ಕೋವಿಡ್ ಮುಕ್ತ ಸಮಾಜ ನಿರ್ಮಾಣವಾಗಲಿದೆ’ ಎಂದು ಹೇಳಿದರು.
‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯ ಬಂದಿದ್ದು, 8ನೇ ತರಗತಿ ಮಕ್ಕಳಿಗೆ ತಲಾ 10 ಕೆ.ಜಿ 350 ಗ್ರಾಂ ಅಕ್ಕಿ, 9 ಮತ್ತು 10ನೇ ತರಗತಿ ಮಕ್ಕಳಿಗೆ ತಲಾ 12 ಕೆ.ಜಿ 450 ಗ್ರಾಂ ಅಕ್ಕಿ ಹಾಗೂ ಎಲ್ಲಾ ಮಕ್ಕಳಿಗೂ ತಲಾ ಒಂದು ಕೆಜಿ ಅಡುಗೆ ಎಣ್ಣೆ ವಿತರಿಸಲಾಗುತ್ತಿದೆ’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ ವಿವರಿಸಿದರು.