ಚಿಂತಾಮಣಿ: ಹೈನುಗಾರಿಕೆಯಲ್ಲಿ ಪುರುಷರಿಗಿಂತ ಮಹಿಳೆಯರ ಪಾತ್ರ ಪ್ರಮುಖ. ಶಿಸ್ತುಬದ್ಧ ಹಾಗೂ ಪ್ರಾಮಾಣಿಕವಾಗಿ ವ್ಯವಹಾರ ನಡೆಸುತ್ತಾರೆ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕರಿಯಪ್ಪಲ್ಲಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 130 ಮಹಿಳಾ ಡೇರಿಗಳು ಕಾರ್ಯ ನಿರ್ವಹಿಸುತ್ತಿದ್ದು,ಸರ್ಕಾರಿ ನೌಕರರಿಗೆ ವೇತನ ಸಿಗುವ ರೀತಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಹಾಲಿನ ಹಣವನ್ನು ಉತ್ಪಾದಕರ ಬ್ಯಾಂಕಿನ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
‘20 ಸಹಕಾರ ಸಂಘಗಳಿಗೆ ರೋಟರಿ ಮೂಲಕ ತರಬೇತಿ ನೀಡಿ, ಪ್ರತಿ ಸಂಘದ 5 ಮಂದಿಗೆ ತಲಾ ₹50ಸಾವಿರ ಬಡ್ಡಿರಹಿತ ಸಾಲ ನೀಡಲಾಗುವುದು’ ಎಂದುಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ. ತಿಪ್ಪಾರೆಡ್ಡಿ ತಿಳಿಸಿದರು.
ಉಪವ್ಯಸ್ಥಾಪಕ ಎ.ವಿ. ಶಂಕರರೆಡ್ಡಿ, ಮಹಿಳಾ ನಿರ್ದೇಶಕಿ ಸುನಂದಮ್ಮ, ಉಪ ವ್ಯವಸ್ಥಾಪಕಿ ಆರ್. ವಿಜಯಲಕ್ಷ್ಮಿ ಮಾತನಾಡಿದರು.
ಸಂಘದ ಅಧ್ಯಕ್ಷೆ ಡಿ.ಎಸ್.ಸುನಿತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಮೀಳಮ್ಮ, ವಿಸ್ತರಣಾಧಿಕಾರಿಗಳಾದ ಎಂ.ಎಸ್.ನಾರಾಯಣಸ್ವಾಮಿ, ವಸಂತಲಕ್ಷ್ಮಿ, ವೆಂಕಟೇಶಮೂರ್ತಿ, ಪ್ರೇಮಕಿರಣ್, ಎನ್. ಶಂಕರ್, ವೆಂಕಟರವಣಪ್ಪ, ಎನ್.ನಾರಾಯಣಸ್ವಾಮಿ, ನಿರ್ದೇಶಕರು ಹಾಗೂ ಉತ್ಪಾದಕರು ಭಾಗವಹಿಸಿದ್ದರು.