ಗುರುವಾರ , ಮಾರ್ಚ್ 23, 2023
29 °C
ಸೂಕ್ತ ಪರಿಹಾರ ನೀಡಲು ರೈತರ ಆಗ್ರಹ

ಜನಪ್ರತಿನಿಧಿಗಳ ಮುಖಕ್ಕೆ ಸಗಣಿ ಬಳಿಯುವ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ನೀಡಿರುವ ರೈತರ ಪಿ-ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಬೇಕು ಹಾಗೂ ಕಡಿದ ಮರಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ನೊಂದ ರೈತರು ಹಾಗೂ ರೈತ ಸಂಘದಿಂದ ಕಾರಿಡಾರ್ ಕಾಮಗಾರಿ ಬಳಿ ಪ್ರತಿಭಟನೆ ನಡೆಸಿ, ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಾಲ್ಕು ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರು ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಡಳಿತ, ತಾಲ್ಲೂಕು ಆಡಳಿತವನ್ನು ಅಂಗಲಾಚಿ ಬೇಡಿಕೊಂಡರು ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ವಿಶೇಷ ಭೂಸ್ವಾಧೀನಾಧಿಕಾರಿಗಳ ಸಭೆ ಕರೆದು ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ರೈತರು ಆಕ್ರೋಶ
ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಪಿ-ನಂಬರ್ ದುರಸ್ತಿ ಮಾಡಿ ರೈತರಿಗೆ ಪರಿಹಾರ ನೀಡಬೇಕು ಇಲ್ಲವಾದರೆ ಮತಕೇಳಲು ಬರುವ ಜನ ಪ್ರತಿನಿಧಿಗಳ ಮುಖಕ್ಕೆ ಸಗಣಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆ ಅಭಿವೃದ್ಧಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೇಳೆ ಎಕರೆಗೆ ₹15 ಲಕ್ಷ ನೀಡುತ್ತೇವೆ ಎಂದು ದಾಖಲೆ ಪಡೆದು ಕೇವಲ ₹3.80 ಲಕ್ಷ ನೀಡಿ ಕೈ  ತೊಳೆದುಕೊಂಡಿದ್ದಾರೆ. ಅಲ್ಲದೆ ತೋಟಗಳಲ್ಲಿ ಬೆಳೆದಿದ್ದ ಮಾವು, ತೆಂಗು, ಹಲಸು, ಹುಣಸೆ, ಸೇಬು ಮರಗಳಿಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಪಿ-ನಂಬರ್ ನೆಪದಲ್ಲಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ರೈತ ಚಂಗೇಗೌಡ ಮತ್ತು ಜನಾರ್ದನ್ ಆರೋಪ
ಮಾಡಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಬಂಗಾರಿ ಮಂಜು, ತಾಲ್ಲುಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಾಬು, ಭಾಸ್ಕರ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಯಾರಂಘಟ್ಟ ಗಿರೀಶ್, ನಟರಾಜ್, ರಾಜಣ್ಣ, ವಿಶ್ವನಾಥ್, ರಾಮೇಗೌಡ, ಕುಮಾರ್, ಜಗದೀಶ್, ವೆಂಕಟರಾಮಪ್ಪ, ಮಂಗಮ್ಮ, ಜುಬೇರ್‌ಪಾಷ, ಹಾದಿಲ್‌ಪಾಷ, ಗುರುಮೂರ್ತಿ, ಸುನಿಲ್‌ಕುಮಾರ್, ಮಂಗಸಂದ್ರ ತಿಮ್ಮಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು