ಬಂಗಾರಪೇಟೆ: ಕಾನೂನು ತಿಳಿವಳಿಕೆ ನೀಡಲು ಪೊಲೀಸ್ ಠಾಣೆಗಳಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ದಯಾನಂದಮೂರ್ತಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕಾನೂನು ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪ್ರತಿ ಠಾಣೆಯಲ್ಲಿ ಸಲಹಾ ಕೇಂದ್ರ ತೆರೆಯಲಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಕಾನೂನು ತಿಳಿವಳಿಕೆ ಇಲ್ಲದವರಿಗೆ ಸಹಾಯ ಹಸ್ತ ನೀಡಲಾಗುತ್ತದೆ ಎಂದರು.
ಕಾನೂನು ಸಮಿತಿಯ ವಕೀಲರು ಠಾಣೆಯಲ್ಲಿದ್ದು, ವಿವಿಧ ಪ್ರಕರಣ ಕುರಿತು ಮಾಹಿತಿ ನೀಡಲಿದ್ದಾರೆ. ಕೆಲ ಸಂದರ್ಭ ಪೊಲೀಸರ ಭಯದಿಂದ ಜನರು ಠಾಣೆಗೆ ಬರದೆ ಹಿಂದೇಟು ಹಾಕುವುದು ಸಹಜ. ಪೊಲೀಸರು ಜನಸ್ನೇಹಿಯಾಗಲು ಕಾನೂನು ಸಲಹಾ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಂಠಯ್ಯ ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಉಚಿತ ಸಲಹಾ ಕೇಂದ್ರ ಸ್ಥಾಪಿಸುತ್ತಿರುವುದು ಉತ್ತಮ ಬೆಳವಣಿಗೆ. ಜನರು ಕಾನೂನು ಅರಿವು ನೆರವು ಪಡೆಯುವುದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಧೀಶ ದೀಪು, ವಕೀಲರ ಸಂಘದ ಅಧ್ಯಕ್ಷ ಎಸ್. ರಾಜಗೋಪಾಲಗೌಡ, ಕಾರ್ಯದರ್ಶಿ ಗೀತಾಶೆಟ್ಟಿ, ಸಬ್ಇನ್ಸ್ಪೆಕ್ಟರ್ಗಳಾದ ಜಗದಿಶ್ ರೆಡ್ಡಿ, ದಯಾನಂದ, ವಕೀಲರಾದ ಮಂಜುನಾಥ, ಎಸ್.ಮಂಜುನಾಥ, ಕೆ.ವಿ.ಅಮರೇಶ ಹಾಜರಿದ್ದರು.