ಕೋಲಾರ: ‘ಸಂಘದಿಂದ ಸಾಲ ಪಡೆದು ಪ್ರಾಮಾಣಿಕವಾಗಿ ಮರು ಪಾವತಿಸಿದವರು ಹಾಗೂ ಪಿಗ್ಮಿ ಸಂಗ್ರಹದಾರರನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಗುತ್ತದೆ’ ಎಂದು ಗೋಲ್ಡ್ಫೀಲ್ಡ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.
ಇಲ್ಲಿ ಶನಿವಾರ ನಡೆದ ಸಂಘದ ನಿರ್ದೇಶಕರ ಸಭೆಯಲ್ಲಿ ಮಾತನಾಡಿ, ‘ಸಹಕಾರಿ ಸಂಸ್ಥೆ ಬೆಳೆಯಲು ಸಮರ್ಪಕ ಸಾಲ ಮರುಪಾವತಿ ಹಾಗೂ ಉಳಿತಾಯ ಹಣ ಸಂಗ್ರಹದಲ್ಲಿ ಸಾಧನೆ ಮುಖ್ಯ’ ಎಂದು ಅಭಿಪ್ರಾಯಪಟ್ಟರು.
‘ರೈತರು, ನಿವೃತ್ತ ಪ್ರಾಂಶುಪಾಲರು, ಪ್ರಾಧ್ಯಾಪಕರು, ಶಿಕ್ಷಕರು ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರಾಗಿದ್ದಾರೆ. ಲಾಭ ಗಳಿಕೆಯಷ್ಟೇ ಸಂಘದ ಗುರಿಯಲ್ಲ. ಸಂಘವು ಸಾಮಾಜಿಕ ಕಾಳಜಿಗೂ ಆದ್ಯತೆ ನೀಡುತ್ತಿದೆ’ ಎಂದು ಹೇಳಿದರು.
‘ಸಂಘದಲ್ಲಿ ನಿರ್ದೇಶಕರಾಗಿರುವವರು ಯಾರಿಗೂ ಲಾಭದ ಉದ್ದೇಶವಿಲ್ಲ. ಬದಲಿಗೆ ಸಂಘವನ್ನು ಸದೃಢಗೊಳಿಸುವ ಬದ್ಧತೆ ಮತ್ತು ಸಮಾಜಕ್ಕೆ ಒಳಿತು ಮಾಡುವ ಆಶಯವಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಸಾಲ ಪಡೆದವರೂ ಅಷ್ಟೇ ಪ್ರಾಮಾಣಿಕತೆಯಿಂದ ಮರುಪಾವತಿ ಮಾಡಬೇಕು’ ಎಂದು ಮನವಿ ಮಾಡಿದರು.
‘ಸಂಘದಿಂದ ಸದ್ಯ ₹ 25 ಸಾವಿರದಿಂದ ₹ 2 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದ ಸದಸ್ಯರು ಸಹ ಶೇ 100ರ ಮರುಪಾವತಿ ಮೂಲಕ ಸಂಘದ ಆರ್ಥಿಕತೆಗೆ ಧಕ್ಕೆಯಾಗದಂತೆ ಸಹಕಾರ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಕಾನೂನು ಸಲಹೆಗಾರ ಟಿ.ಜಿ.ಮನ್ಮಥರೆಡ್ಡಿ, ಉಪಾಧ್ಯಕ್ಷ ಶ್ರೀರಾಮ್, ನಿರ್ದೇಶಕರಾದ ಸುವರ್ಣರೆಡ್ಡಿ, ಮುನಿವೆಂಕಟಪ್ಪ, ವೆಂಕಟರಾಜು, ನಾಗರಾಜ್, ಎ.ಎಸ್.ನಂಜುಂಡೇಗೌಡ, ಕೆ.ವಿ.ಗೋಪಾಲ್, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಗೋಪಾಲ್ ಸಭೆಯಲ್ಲಿ ಪಾಲ್ಗೊಂಡರು.