ಬೀದರ್: ಮಾವಿನ ಗಿಡಗಳಲ್ಲಿ ಲಿಂಬೆ ಮತ್ತು ಪೇರಲ (ಜಾಪಳ) ಗಾತ್ರದ ಕಾಯಿಗಳಾಗಿವೆ. ಮೋಡ ಕವಿದ ವಾತಾವರಣ, ಪ್ರಖರ ಬಿಸಿಲಿನ ಶಾಖ ಮತ್ತು ಜೋರಾಗಿ ಬೀಸುವ ಗಾಳಿಯಿಂದಾಗಿ ಮಿಡಿಗಾಯಿಗಳಲ್ಲಿ ಕಂದು ಬಣ್ಣ ಹಾಗೂ ಕಪ್ಪು ಕಲೆಗಳಾಗಿ ಉದುರುತ್ತಿರುವುದು ಕಂಡು ಬಂದಿದೆ. ಮಾವು ಬೆಳೆಗಾರರು ಮುತುವರ್ಜಿ ವಹಿಸಿ ಕೂಡಲೆ ಸಸ್ಯ ಸಂರಕ್ಷಣೆ ಹಾಗೂ ನೀರು ನಿರ್ವಹಣೆ ಕ್ರಮಗಳನ್ನು ಅನುಸರಿಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಸಲಹೆ ನೀಡಿದ್ದಾರೆ.
ಮುಂದೆ ಬರುವ ಮಾವಿನ ವಾಟೆ ಕೊರೆಯುವ ಕೀಟದ ನಿಯಂತ್ರಣಕ್ಕಾಗಿ ಕಾಯಿಗಳು ಲಿಂಬೆ ಹಣ್ಣಿನ ಗಾತ್ರ ಹೊಂದಿರುವಾಗ ಅಸಿಫೇಟ್ 75, ಎಸ್ಪಿ 1.5 ಗ್ರಾಂ ಅಥವಾ ಡೆಕಾಮೆಥ್ರಾನ್ 1 ಮಿ.ಲಿ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದನ್ನು ಮೂರು ವಾರಗಳ ನಂತರ ಪುನರಾವರ್ತಿಸಬೇಕು ಎಂದು ಹೇಳಿದ್ದಾರೆ.
ಕೀಟಗಳ ಹಾನಿಗೆ ತುತ್ತಾಗಿ ಕೆಳಗೆ ಬಿದ್ದರುವ ಕಾಯಿಗಳನ್ನು ವಾರಕ್ಕೊಮ್ಮೆ ಆಯ್ದು, ತೋಟದ ಅಂಚಿನಲ್ಲಿ ಗುಂಡಿ ತೆಗೆದು ಅದರಲ್ಲಿ ಸುರಿದು ಮಣ್ಣು ಮುಚ್ಚಬೇಕು ಅಥವಾ ಕಾಯಿಗಳ ಮೇಲೆ ಮತ್ತು ಕೆಳಭಾಗದಲ್ಲಿ ಕಸ-ಕಡ್ಡಿ ಹಾಕಿ ಸುಡಬೇಕು. ಇದನ್ನು ಮಾವು ಕೊಯ್ಲಿನವರೆಗೂ ಮುಂದುವರೆಸಬೇಕು ಎಂದು ತಿಳಿಸಿದ್ದಾರೆ.
ಕಾಯಿಗಳಲ್ಲಿ ಕಪ್ಪು ಕಲೆಗಳಾಗಿ ಉದುರಿದಲ್ಲಿ ಬ್ಲೈಟ್ಯಾಕ್ಸ್-3 ಗ್ರಾಂ/ಕುಪ್ರೆಸಾಲ್-3 ಗ್ರಾಂ/ಬ್ಲೂ ಕಾಪರ್ ಅನ್ನು 3 ಗ್ರಾಂ+ಝಿಂಕಸಲ್ಫೇಟ್ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮಳೆಯಾದ ನಂತರ ಎಕರೆಗೆ 8 ಕೆ.ಜಿ ಫೊರೇಟ್ 10 ಗ್ರಾಂ ಅಥವಾ 10 ಕಿ.ಗ್ರಾಂ. ಕಾರ್ಬೊಪ್ಯುರಾನ್ 3ಜಿ ಅಥವಾ 10 ಕಿ.ಗ್ರಾಂ. ಕ್ವಿನಾಲ್ಫಾಸ್ ಹರಳುಗಳನ್ನು ಗಿಡಗಳ ಮಡಿಗಳಲ್ಲಿ ತಿಪ್ಪೆಗೊಬ್ಬರ/ಎರೆಹುಳು ಗೊಬ್ಬರಗಳೊಂದಿಗೆ ಮಿಶ್ರಣ ಮಾಡಿ ಚಲ್ಲಬೇಕು ಎಂದು ಹೇಳಿದ್ದಾರೆ.
ಮೇಲಿನ ಔಷಧಿ ಸಿಂಪರಣೆಯಾದ 10 ದಿನಗಳ ನಂತರ ಮ್ಯಾಂಗೋ ಸ್ಪೇಷಲ್ 1 ಕೆ.ಜಿ+8 ಲಿಂಬೆ ಹಣ್ಣುಗಳ ರಸ+8 ಚೀಟ್ ಶಾಂಪು 200 ಲೀ.ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸೂಚಿಸಿದ್ದಾರೆ. ಪ್ರಸ್ತುತ ನೀರನ್ನು ಕೊಡಬಹುದಾಗಿದ್ದು, ಕಾಲುವೆ ನೀರಾವರಿ ಇದ್ದಲ್ಲಿ 15 ದಿನಕೊಮ್ಮೆ ಮತ್ತು ಹನಿ ನೀರಾವರಿ ವ್ಯವಸ್ಥೆ ಇದ್ದಲ್ಲಿ ದಿನಕ್ಕೆ 3 ಗಂಟೆ ನೀರು ಕೋಡಬೇಕು. ಸಂಜೆ ವೇಳೆ ನೀರು ಕೊಡುವುದು ಉತ್ತಮ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಹೋಬಳಿ, ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳು ಅಥವಾ ಹಾರ್ಟಿಕ್ಲಿನಿಕ್ ತಜ್ಞರಾದ ಡಾ.ವಿಜಯಕುಮಾರ್ ರೇವಣ್ಣವರ್ (9482053985) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.