ಕೋಲಾರ: 14ರ ಹರೆಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜಿಲ್ಲೆಯ ಕೆಜಿಎಫ್ ಉಪವಿಭಾಗದ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಪೊಲೀಸ್ ಠಾಣೆ ಸರಹದ್ದಿನ ನಾಲ್ವರು ಅಪರಾಧಿಗಳಿಗೆ ಪೋಕ್ಸೊ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಗಾರಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ವಾಸಿ ಆನಂದ್, ಕೆಜಿಎಫ್ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕಾಂತರಾಜ್, ಬಂಗಾರಪೇಟೆ ತಾಲ್ಲೂಕಿನ ಕಾಮಸಮದ್ರಂ ಎ.ಕೆ.ಕಾಲೋನಿ ನಿವಾಸಿ ಪ್ರವೀಣ್ ಮತ್ತು ಬೆಂಗನೂರು ಗ್ರಾಮದ ವೇಣು ಶಿಕ್ಷೆಗೆ ಒಳಗಾದವರು.
2022ರ ಫೆಬ್ರುವರಿ 18ರಂದು ಬಾಲಕಿಯು ತನ್ನ ಜನ್ಮದಿನದ ಪ್ರಯುಕ್ತ ಹೊಸ ಬಟ್ಟೆ ಕೊಡಿಸುವಂತೆ ತಾಯಿ ಬಳಿ ಕೇಳಿದ್ದಳು. ಬಟ್ಟೆ ಕೊಡಿಸದ ಕಾರಣ ಮುನಿಸಿಕೊಂಡು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದಳು. ಈ ಸಂದರ್ಭದಲ್ಲಿ ಆ ಬಾಲಕಿಯನ್ನು ಅಪಹರಿಸಿದ ಯುವಕರು ತನಿಮಡುಗು ಗ್ರಾಮದ ಬಾರ್ ಹಿಂಭಾಗದಲ್ಲಿರುವ ಸರ್ವೆ ನಂ 17ರ ಬೀಡು ಜಮೀನಿನಲ್ಲಿ ಬಿಯರ್ ಕುಡಿಸಿ, ಎಗ್ ರೈಸ್ ತಿನ್ನಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಸಂಬಂಧ ದೂರು ದಾಖಲಾಗಿತ್ತು.
ಕಲಂ 363, 376 (ಡಿಎ), 376 (3), 34 ಐಪಿಸಿ ಮತ್ತು ಕಲಂ 6 ಪೋಕ್ಸೊ ಕಾಯ್ದೆ ರೀತಿ ಪ್ರಕರಣ ದಾಖಲಿಸಿಕೊಂಡ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು. ಸಾಮೂಹಿಕ ಅತ್ಯಾಚಾರವೆಸಗಿರುವುದು ತನಿಖೆಯಿಂದ ಸಾಬೀತಾಗಿದ್ದು, ಸರ್ಕಲ್ ಇನ್ಸ್ಪೆಕ್ಟರ್ ಜೆ.ಎನ್.ಆನಂದ್ ಕುಮಾರ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಧಿಗಳಾದ ಆನಂದ್ (ಎ1), ಕಾಂತರಾಜ್ (ಎ2), ಪ್ರವೀಣ್ (ಎ3) ಮತ್ತು ವೇಣು (ಎ4) ಅವರಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.