ಮುಳಬಾಗಿಲು: ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನವನ್ನು ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ಸೋಮವಾರ ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಮನುಸ್ಮೃತಿ ಮಾದರಿ ಪ್ರತಿ ಸುಡುವ ಮೂಲಕ ಆಚರಿಸಲಾಯಿತು.
ದಸಂಸ(ಸಂಯೋಜಕ) ಜಿಲ್ಲಾ ಸಂಘಟನಾ ಸಂಯೋಕ ಮೆಕಾನಿಕ್ ಶ್ರೀನಿವಾಸ್ ಮಾತನಾಡಿ, 1925, ಡಿ.25 ರಾತ್ರಿ 9 ಗಂಟೆಗೆ ಸಾವಿರಾರು ಜನರ ಸಮ್ಮುಖದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ದಿನದ ನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ದಲಿತರು ಮತ್ತು ಮಹಿಳೆಯರನ್ನು ಕೀಳಾಗಿ ಕಾಣುವ ಜಾತಿ ವ್ಯವಸ್ಥೆ ಪ್ರತಿಪಾದಿಸುವ ಮನುಸ್ಮೃತಿ ಎಂದಿಗೂ ಒಪ್ಪುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರ ಸಿದ್ಧಾಂತ ಅನುಸರಿಸಿ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಲಾಗುವುದು ಎಂದರು. ಜಿಲ್ಲಾ ಸಂಘಟನಾ ಸಂಯೋಜಕ ಕೀಲುಹೊಳಲಿ ಸತೀಶ್ ಮಾತನಾಡಿ, ಶತ–ಶತಮಾನಗಳಿಂದ ದಲಿತ ಸಮುದಾಯವನ್ನು ಪ್ರಾಣಿ–ಪಕ್ಷಿಗಳಿಗಿಂತ ಕೀಳಾಗಿ ನೋಡಿದ ಮನಸ್ಮೃತಿ ನಂಬುವುದಿಲ್ಲ ಎಂದು ಹೇಳಿದರು.
ತಾಲೂಕು ಸಂಯೋಜಕ ಗುಜ್ಜಮಾರಂಡಹಳ್ಳಿ ಜಗದೀಶ್, ಜಿಲ್ಲಾ ಸಂಘಟನಾ ಸಂಯೋಜಕ ಕಿಟ್ಟ, ನಗರ ಘಟಕ ಸಂಯೋಜಕ ಅಭಿ, ಅಮೃತಯ್ಯ, ಶ್ರೀರಾಮ್, ಬಷೀರ್, ರಾವಣ, ಆಂಜಿ, ಲಕ್ಷಣ್, ಗೋವಿಂದರಾಜು ಪಾಲ್ಗೊಂಡಿದ್ದರು.