ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ | ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ: ಕಾಲೇಜು ಆಡಳಿತ ಮಂಡಳಿ, ಕಿರುಕುಳ ಆರೋಪ

Published 5 ಜೂನ್ 2023, 20:20 IST
Last Updated 5 ಜೂನ್ 2023, 20:20 IST
ಅಕ್ಷರ ಗಾತ್ರ

ಕೋಲಾರ: ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ಪದವಿ ಮೊದಲ ವರ್ಷದ ವಿದ್ಯಾರ್ಥಿನಿ ಭಾನುವಾರ ಕೋಲಾರ ತಾಲ್ಲೂಕಿನ ಕೆಂದಟ್ಟಿ ಬಳಿಯ ಕಲ್ಲುಗಣಿಯಲ್ಲಿ ನಿಂತಿದ್ದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಬಳ್ಳಾರಿಯ ಕೌಲ್‌ ಬಜಾರ್‌ ನಿವಾಸಿ ಪಿ.ದರ್ಶಿನಿ (24) ಎಂದು ಗುರುತಿಸಲಾಗಿದೆ. 

ಕೊಪ್ಪಳದಲ್ಲಿ ಎಂಬಿಬಿಎಸ್ ಮುಗಿಸಿದ್ದ ದರ್ಶಿನಿ ಏಳು ತಿಂಗಳ ಹಿಂದೆ ಹೊಸಕೋಟೆಯ ಎಂವಿಜೆ ಕಾಲೇಜಿನಲ್ಲಿ ಎಂ.ಡಿ (ಮಕ್ಕಳ ರೋಗ ಶಾಸ್ತ್ರ) ಕೋರ್ಸ್‌ಗೆ ಪ್ರವೇಶ ಪಡೆದಿದ್ದರು.  

ತಂದೆಯನ್ನು ಕಳೆದುಕೊಂಡಿದ್ದ ಅವರು ಕೆಲಸದ ಒತ್ತಡದ ಜೊತೆಗೆ ಹಿರಿಯ ವೈದ್ಯರ ಕಿರಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.  ಬಾಲ್ಯ ಸ್ನೇಹಿತ ಶಿವಮಣಿ ಎಂಬುವರ ಬಳಿ ಆತ್ಮಹತ್ಯೆ ವಿಚಾರ ಹಂಚಿಕೊಂಡಿದ್ದರು ಎಂದು ತಿಳಿದು ಬಂದಿದೆ.

‘ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯರ ಕಿರುಕುಳ ಕಾರಣ’ ಎಂದು ಮೃತ ವಿದ್ಯಾರ್ಥಿನಿಯ ತಮ್ಮ ಪಿ.ಪ್ರಜ್ವಲ್‌, ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯರ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

‘ದಿನವಿಡಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾಗಿತ್ತು. ಊಟಕ್ಕೂ ಬಿಡುತ್ತಿರಲಿಲ್ಲ. ಹಿರಿಯ ವೈದ್ಯರ ಕಿರುಕುಳದ ಬಗ್ಗೆ ತಾಯಿಯ ಬಳಿಯೂ ಹೇಳಿಕೊಂಡಿದ್ದಳು. ಹಿರಿಯ ವೈದ್ಯ ಡಾ.ಮಹೇಶ್ ಎಂಬುವರ ಕಿರುಕುಳ ಹೆಚ್ಚಾಗಿತ್ತು ಮತ್ತು ಅವರು ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ತಾಯಿ ಹಾಗೂ ಸ್ನೇಹಿತೆ ಜೊತೆ ನನ್ನ ಅಕ್ಕ ಅಳಲು ತೋಡಿಕೊಂಡಿದ್ದಳು’ ಎಂದು ತಿಳಿಸಿದ್ದಾರೆ.

‘ಅಕ್ಕ ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ₹2 ಲಕ್ಷ ಶುಲ್ಕ ಪಾವತಿಸಲಾಗಿತ್ತು. ಆದರೆ, ಅಲ್ಲಿ ಸರಿಯಾದ ಊಟ ಕೊಡುತ್ತಿರಲಿಲ್ಲ. ಹಾಗಾಗಿ ಅಕ್ಕ ಅರ್ಧಕ್ಕೆ ವ್ಯಾಸಂಗ ನಿಲ್ಲಿಸಲು ಮುಂದಾದಾಗ ಆಡಳಿತ ಮಂಡಳಿಯವರು ₹50 ಲಕ್ಷ ಪಾವತಿಸುವಂತೆ ಷರತ್ತು ವಿಧಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಕಾಲೇಜಿನಿಂದ 35 ಕಿ.ಮೀ ದೂರದ ಕೆಂದಟ್ಟಿ ಎಂಬಲ್ಲಿಗೆ ಹೋಗಿ ನನ್ನ ಅಕ್ಕ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಿಂದ ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT