ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ದಲಿತ ಸಂಘಟನೆ ದುರ್ಬಳಕೆ ದುರಂತ- ರಮೇಶ್ ಕಳವಳ

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್ ಕಳವಳ
Last Updated 30 ಏಪ್ರಿಲ್ 2022, 13:51 IST
ಅಕ್ಷರ ಗಾತ್ರ

ಕೋಲಾರ: ‘ದಲಿತ ಚಳವಳಿಗೆ ಭವ್ಯ ಇತಿಹಾಸವಿದೆ. ಹಿಂದೆ ಹಲವು ದಲಿತ ಮುಖಂಡರು ದಲಿತರ, ಬಡವರ, ದಮನಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಇಂದು ಯಾರದೋ ಸ್ವಾರ್ಥ ಹಿತಾಸಕ್ತಿಗೆ ದಲಿತ ಸಂಘಟನೆಗಳು ದುರ್ಬಳಕೆ ಆಗುತ್ತಿರುವುದು ದುರಂತ’ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್ ಕಳವಳ ವ್ಯಕ್ತಪಡಿಸಿದರು.

‘ದಲಿತ ಚಳವಳಿ ಎತ್ತ ಸಾಗಬೇಕಾಗಿತ್ತು, ಇಂದು ಎತ್ತ ಸಾಗುತ್ತಿದೆ’ ವಿಚಾರ ಕುರಿತು ರಾಜ್ಯ ದಲಿತ ಸಂಘರ್ಷ ಸಮಿತಿಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿ, ‘ಪ್ರೊ.ಬಿ.ಕೃಷ್ಣಪ್ಪರ ಬೆನ್ನಿಗೆ ಚೂರಿ ಹಾಕಿದವರು ಇಂದು ಅವರ ಫೋಟೊ ಬಳಸಿಕೊಂಡು ಅವರ ಹೆಸರಿನಲ್ಲೇ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ದಲಿತ ಸಂಘಟನೆಗಳು ದಲಿತ ಚಳವಳಿಯ ಮೂಲ ಆಶಯ ಮರೆತು ಭಿನ್ನ ಹಾದಿಯಲ್ಲಿ ಸಾಗುತ್ತಿವೆ. ಕೆಲ ಸಂಘಟನೆಗಳಿಗೆ ಗೊತ್ತು ಗುರಿಯಿಲ್ಲ. ಈ ಬೆಳವಣಿಗೆ ಒಳ್ಳೆಯದಲ್ಲ. ಯುವಕರು ಒಗ್ಗಟಿನಿಂದ ಕೃಷ್ಣಪ್ಪರ ಹೆಜ್ಜೆ ಗುರುತುಗಳ ಜತೆಯಲ್ಲಿ ಅವರ ತತ್ವಾದರ್ಶ ಮೈಗೂಡಿಸಿಕೊಂಡು ಮುಂದೆ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

‘70ರ ದಶಕದಲ್ಲಿ ಕೃಷ್ಣಪ್ಪರ ನೇತೃತ್ವದಲ್ಲಿ ಭೂಮಿ ಹೋರಾಟದಿಂದ ಹಿಡಿದು ದೌರ್ಜನ್ಯಗಳು ನಡೆದಾಗ ನ್ಯಾಯ ಕೊಡಿಸಿದ ಪರಂಪರೆ ದಲಿತ ಸಂಘಟನೆಗೆ ಇದೆ. ದಲಿತ ಚಳವಳಿಯ ಬಗ್ಗೆ ವೇದಿಕೆಯಲ್ಲಿ ಮಾತನಾಡುವುದಲ್ಲ. ಕೃಷ್ಣ‌ಪ್ಪರ ಹಾದಿಯಲ್ಲಿ ಮುಂದೆ ಸಾಗಬೇಕು. ದಲಿತರಲ್ಲಿನ ಉಪ ಜಾತಿಗಳು ಮೊದಲು ಹೋಗಬೇಕು. ದಲಿತ ಸಂಘಟನೆಗಳು ಪರಸ್ಪರ ಭಿನ್ನಾಭಿಪ್ರಾಯ ಮರೆತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ದಲಿತ ಮುಖಂಡ ಟಿ.ವಿಜಯ್‌ಕುಮಾರ್‌ ಆಶಿಸಿದರು.

ದಾರಿದೀಪವಾಗಲಿ: ‘ಸಮಾಜದಲ್ಲಿನ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಸಮಾಜವನ್ನು ಕಟ್ಟಬೇಕಿದೆ. ತುಳಿತಕ್ಕೆ ಒಳಗಾದವರನ್ನು ಮೇಲೆ ಎತ್ತುವ ಸಂಘಟನೆಯ ಉದ್ದೇಶಗಳನ್ನು ಮರೆಯಬಾರದು. ಅಂಬೇಡ್ಕರ್ ಕನಸಿನ ಆಶಯಗಳು ನಮಗೆ ಮತ್ತು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು’ ಎಂದು ದಲಿತ ಮುಖಂಡ ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಎನ್‌.ಮುನಿಯಪ್ಪ, ದಲಿತ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ರಾಮಯ್ಯ, ವಿಜಿ, ವೆಂಕಟರವಣ, ಕೇಶವ, ವೆಂಕಟೇಶ್, ಸಂಪತ್‌ಕುಮಾರ್, ವೆಂಕಟಾಚಲಪತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT