ಕೋಲಾರ: ‘ಅಧಿಕಾರಿಗಳು ವಿನಾಕಾರಣ ಕಚೇರಿಗೆ ಸಾರ್ವಜನಿಕರನ್ನು ಅಲೆದಾಡಿಸುವುದು ಬಿಟ್ಟು, ಸಮಸ್ಯೆಗೆ ಸ್ಪಂದಿಸಬೇಕು ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.
ಇಲ್ಲಿನ ಗೃಹ ಕಚೇರಿಯಲ್ಲಿ ಇಫ್ಕೋ ಟೋಕಿಯೋ ಸಂಸ್ಥೆಯಿಂದ ಫಾಲಾನುಭವಿಗಳಿಗೆ ಶುಕ್ರವಾರ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, ‘ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಇರುವ ಬಗ್ಗೆ ದೂರುಗಳು ಬಂದಿವೆ, ವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಜಿಲ್ಲೆಯ ಆಡಳಿತ ಯಂತ್ರ ಚುರುಕಾಗಬೇಕಿದೆ, ಅಧಿಕಾರಿಗಳು ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸ ಮಾಡಬೇಕು. ಅಧಿಕಾರಿಗಳು ಬದಲಾಗಲು ಸಾಧ್ಯವಾಗದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು’ ಎಂದು ಹೇಳಿದರು.
‘ಕೆ.ಸಿ.ವ್ಯಾಲಿ ನೀರಿನ ಪ್ರಮಾಣವನ್ನು ೪೦೦ ಎಂಎಲ್ಡಿಗೆ ಹೆಚ್ಚಿಸಲಾಗುತ್ತಿದೆ. ಇದರಿಂದ ಕೆರೆಗಳಿಗೆ ನೀರು ವೇಗವಾಗಿ ಹರಿಯಲಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿಲ್ಲ. ಇವರಿಗೆಲ್ಲ ಇನ್ನ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇನ್ನು ಒಂದು ತಿಂಗಳಲ್ಲಿ ಕೋಲಾರಮ್ಮ ಕೆರೆ ನೀರು ಹರಿಯುವ ನಿರೀಕ್ಷೆಯಿದೆ. ಅಧಿಕಾರಿಗಳು ಸಬೂಬು ಹೇಳಿಕೊಂಡೆ ಕಾಲಹರಣ ಮಾಡುತ್ತಿದ್ದಾರೆ. ಈಗಾಗಲೇ ನೀರು ಹರಿದಿರುವ ಕೆರೆಗಳ ಸುತ್ತಮುತ್ತಲಿನ ಕೊಳವೆಬಾವಿಗ ಅಂರ್ಜಲ ಮಟ್ಟ ವೃದ್ಧಿಯಾಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ರೈತರು ಯಾರು ನೇರವಾಗಿ ನೀರನ್ನು ಯಾವುದೇ ಉದ್ದೇಶಕ್ಕೆ ಬಳಕೆ ಮಾಡಬಾರದು’ ಎಂದರು.
ಟಿಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್ ಪಾಷ ಹಾಜರಿದ್ದರು.