ಮುಳಬಾಗಿಲು: ತಾಲ್ಲೂಕಿನ ನಲ್ಲಂಡಹಳ್ಳಿ ಗ್ರಾಮದಲ್ಲಿ ತಿಪ್ಪೆ ಹಾಕುವ ವಿಚಾರದಲ್ಲಿ ಉಂಟಾದ ವ್ಯಾಜ್ಯದಲ್ಲಿ ಏಳು ಜನರು ಸೇರಿ ಒಬ್ಬರಿಗೆ ಚಾಕುವಿನಿಂದ ತಿವಿದು ಕೊಲೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ನಲ್ಲಂಡಹಳ್ಳಿ ಗ್ರಾಮದ ಶಿವಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಆನಂದ್, ಛತ್ರಕೋಡಿಹಳ್ಳಿ ನಾರಾಯಣಸ್ವಾಮಿ, ಸುರೇಶ್ ಅವರನ್ನು ಬಂಧಿಸಲಾಗಿದೆ.
ಸರ್ಕಾರ 1996ರಲ್ಲಿ ನಲ್ಲಂಡಹಳ್ಳಿ ಗ್ರಾಮದಲ್ಲಿನ ನಿವೇಶನ ರಹಿತರಿಗೆ ಸರ್ಕಾರಿ ಜಮೀನಿನ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಿತ್ತು. ಆದರೆ, ನಿವೇಶನಗಳ ಪ್ರದೇಶವನ್ನು ಫಲಾನುಭವಿಗಳಿಗೆ ಗುರುತಿಸಿಕೊಟ್ಟಿರಲಿಲ್ಲ.
ಈ ಪ್ರದೇಶದಲ್ಲಿ ಗ್ರಾಮಸ್ಥರು ಹಲವು ವರ್ಷಗಳಿಂದ ತಿಪ್ಪೆಗಳನ್ನು ಹಾಕುತ್ತಿದ್ದರು. ಆದರೆ, ಗ್ರಾಮದ ವೆಂಕಟೇಶಪ್ಪ ಎಂಬುವವರು ಆ ಪ್ರದೇಶ ತನ್ನದೆಂದು ಗಲಾಟೆ ಮಾಡುತ್ತಿದ್ದರು. ಆ ಕಾರಣದಿಂದ ಗ್ರಾಮಸ್ಥರು ಮತ್ತು ವೆಂಕಟೇಶಪ್ಪ ನಡುವೆ ಹಲವಾರು ಬಾರಿ ಸಂಘರ್ಷ ನಡೆದು ಪ್ರಕರಣಗಳು ಠಾಣೆ ಮೆಟ್ಟಿಲೇರಿದ್ದವು.
ಗ್ರಾಮದ ಸೀನಪ್ಪ ಎಂಬುವವರಿಗೂ ವೆಂಕಟೇಶಪ್ಪ ಅವರ ಮನೆಯ ಮುಂಭಾಗದಲ್ಲಿಯೇ ನಿವೇಶನದ ಹಕ್ಕುಪತ್ರ ನೀಡಲಾಗಿದೆ. ಆ ಜಾಗದಲ್ಲಿ ಸೀನಪ್ಪ ಅವರ ಮಗ ಶಿವಕುಮಾರ್ ತಿಪ್ಪೆಹಾಕಲು ಪ್ರಯತ್ನಿಸಿದಾಗ ಆ ಪ್ರದೇಶ ತಮ್ಮದೆಂದು ವೆಂಕಟೇಶಪ್ಪ ಅವರ ಮಕ್ಕಳು ಸ್ನೇಹಿತರೊಡಗೂಡಿ ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದರು.