ಕೋಲಾರ: ವಿಶೇಷ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ

ಕೋಲಾರ: ತಾಲ್ಲೂಕಿನ ಜನ್ನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಡುವಿನ ಅಂತರ ಕಡಿಮೆ ಮಾಡುವ ವಿಶೇಷ ಸಂಪರ್ಕ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ವೆಂಕಟಮುನಿಯಪ್ಪ, ‘ಇದೊಂದು ಅಪರೂಪದ ಯೋಜನೆ, ಜನ್ನಘಟ್ಟ ಗ್ರಾ.ಪಂ ವ್ಯಾಪ್ತಿಯ ಗೊಟ್ಟಹಳ್ಳಿ, ದಿನ್ನೂರು, ತುರಾಂಡಹಳ್ಳಿ ಗ್ರಾಮಕ್ಕೆ ರಸ್ತೆ ಮೂಲಕ ತೆರಳಲು ಸುಮಾರು 10 ಕಿ.ಮೀ ದೂರ ಕ್ರಮಿಸಬೇಕಾಗಿತ್ತು’ ಎಂದರು.
‘ಗ್ರಾ.ಪಂ ತೆಗೆದುಕೊಂಡು ಉತ್ತಮ ನಿರ್ಧಾರದಿಂದಾಗಿ ಈಗ ಪಾಲಾರ್ ನದಿ ಮಾರ್ಗದ ಕೆ.ಸಿ ವ್ಯಾಲಿ ಯೋಜನೆ ಮೋರಿಗಳ ನಡುವೆ ರಸ್ತೆ ನಿರ್ಮಿಸುವ ಮೂಲಕ 10 ಕಿ.ಮೀ ದೂರವನ್ನು ಕೇವಲ 1.50 ಕಿ.ಮೀಗೆ ಇಳಿಸಲಾಗುತ್ತಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ಗ್ರಾಮಗಳ ಸಮಗ್ರ ಅಭಿವೃದ್ದಿಯಲ್ಲಿ ರಸ್ತೆ ಸಂಪರ್ಕ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾ.ಪಂ ವ್ಯಾಪ್ತಿಯ ಎಲ್ಲಾ 8 ಗ್ರಾಮಗಳ ಪ್ರತಿನಿಧಿಗಳ ಒಮ್ಮತದ ನಿರ್ಧಾರದಂತೆ 1.5 ಕಿ.ಮೀ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಗ್ರಾ.ಪಂಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಉತ್ತಮವಾಗಿದ್ದರೆ ಮಾತ್ರ ಜನ ಇಲ್ಲಿಗೆ ಬಂದು ತಮ್ಮ ಸಮಸ್ಯೆ ಹೇಳಲು ಮತ್ತು ಸೌಲಭ್ಯ ಪಡೆಯಲು ಸಹಾಯವಾಗುತ್ತದೆ’ ಎಂದು ಹೇಳಿದರು.
‘ನರೇಗಾ ಯೋಜನೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಪ್ರತಿ ಹಳ್ಳಿಗೂ ಸಮರ್ಪಕ ರಸ್ತೆ ಒದಗಿಸಲು ಪ್ರಯತ್ನ ಮಾಡುತ್ತೇವೆ. ಕೋವಿಡ್ ನಿಯಂತ್ರಣದಲ್ಲಿ ಜನ್ನಘಟ್ಟ ಗ್ರಾ.ಪಂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಕೋವಿಡ್ ಮುಕ್ತ ಗ್ರಾ.ಪಂಗೆ ಶಕ್ತಿಮೀರಿ ಕೆಲಸ ಮಾಡಿದ್ದೇವೆ. ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ, ಮಾಸ್ಕ್ ನೀಡಿಕೆ, ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದೇವೆ’ ಎಂದು ಗ್ರಾ.ಪಂ ಅಧ್ಯಕ್ಷ ವಿ.ಸತೀಶ್ಮೂರ್ತಿ ಮಾಹಿತಿ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸುಗಟೂರು ಎಸ್ಎಫ್ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಗ್ರಾ.ಪಂ ಸದಸ್ಯರಾದ ಬಸವರಾಜ್, ವೆಂಕಟೇಶ್, ಎಸ್.ಬಿ.ಲಕ್ಷ್ಮಣ್, ಚೌಡಪ್ಪ, ಆಂಜನೇಯರೆಡ್ಡಿ, ದ್ಯಾವಣ್ಣ, ವೆಂಕಟಾಚಲಪತಿ, ಮಾಜಿ ಸದಸ್ಯ ರವಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.