ಕೋಲಾರ: ‘ಭಾರತೀಯರ ಆರಾಧ್ಯದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗಬೇಕು. ಈ ಕಾರಣಕ್ಕೆ ರಾಮಮಂದಿರ ನಿಧಿ ಸಮರ್ಪಣೆ ಮಾಡಬೇಕು’ ಎಂದು ಬಜರಂಗದಳ ಸದಸ್ಯ ಬಾಲಾಜಿ ಮನವಿ ಮಾಡಿದರು.
ನಗರದ ರಾಮದೇವರ ಗುಡಿಯಲ್ಲಿ ಸೋಮವಾರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಶ್ರೀರಾಮನ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವುದು ಈ ದೇಶದ ಗೌರವದ ಪ್ರತೀಕ’ ಎಂದು ತಿಳಿಸಿದರು.
‘ಮಂದಿರ ನಿರ್ಮಾಣಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ದೇಶದ ಪ್ರತಿ ಪ್ರಜೆಯೂ ನಿಧಿ ಸಮರ್ಪಿಸಿ ಈ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೊಡ್ಡಪೇಟೆ, ಕಿಲಾರಿಪೇಟೆ ಸೇರಿದಂತೆ ನಗರದ ಹಲವೆಡೆ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಯಿತು. ಬಜರಂಗದಳ ಸದಸ್ಯರಾದ ಜಗದೀಶ್, ಓಂಪ್ರಕಾಶ್, ಚಿನ್ನಪ್ಪ, ನಾಗರಾಜ್, ಮಹೇಶ್, ಮುನಿವೆಂಕಟ ಯಾದವ್, ಮಂಜುನಾಥ್ ಪಾಲ್ಗೊಂಡರು.