ಕೋಲಾರ: ‘ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರಿಗೆ ಗೊತ್ತಿರಬಹುದೇನೋ? ಇಲಾಖೆಯ ಗಮನಕ್ಕೂ ಆ ವಿಚಾರ ಬಂದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಅಯೋಧ್ಯೆ ವಿಚಾರವಾಗಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಗೋಧ್ರಾ ರೀತಿಯ ಮತ್ತೊಂದು ದುರಂತ ಸಂಭವಿಸಲಿದೆ ಎಂಬ ಹರಿಪ್ರಸಾದ್ ಹೇಳಿಕೆ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
‘ಹರಿಪ್ರಸಾದ್ ಯಾವ ಮಾಹಿತಿ ಆಧರಿಸಿ ಅಥವಾ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇದು ವೈಯಕ್ತಿಕ ಹೇಳಿಕೆ ಎಂದು ಅವರೇ ಹೇಳಿಕೊಂಡಿರುವಾಗ ಮತ್ತೆ ಇನ್ನೇನಿದೆ? ಸರ್ಕಾರಕ್ಕೆ ಯಾರೇ ಆಗಲಿ ಒಳ್ಳೆಯ ಸಲಹೆ ನೀಡಿದರೆ ಪಡೆದು ಸ್ವೀಕಾರ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದರು.
‘ರಾಮಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮವು ರಾಜಕೀಯ ಕಾರ್ಯಕ್ರಮವಾಗಬಾರದು. ಶ್ರೀರಾಮ ಒಳ್ಳೆಯ ಆಡಳಿತ ನಡೆಸಿದ್ದ. ಅದಕ್ಕೆ ರಾಮರಾಜ್ಯ ಎಂದು ಕರೆದಿದ್ದರು. ದೇಶವು ರಾಮರಾಜ್ಯ ಆಗಬೇಕು ಎನ್ನುವ ಬಗ್ಗೆ ನಾವೂ ಅನೇಕ ಭಾಷಣ ಮಾಡಿದ್ದೇವೆ. ರಾಮ ಎಲ್ಲರಿಗೂ ಸೇರಿದವನಾಗಿದ್ದರಿಂದ ಇದರಲ್ಲಿ ರಾಜಕೀಯ ಬೇಡ ಎಂಬುದನ್ನು ನಾನೂ ಹೇಳಿದ್ದೇನೆ’ ಎಂದು ತಿಳಿಸಿದರು.
ಕೋಲಾರದಲ್ಲಿನ ಮರ್ಯಾದಾ ಹತ್ಯೆ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದರು.