ಕೋಲಾರ: ಯಾವುದೇ ಧರ್ಮ ಹಿಂಸೆಗೆ ಪ್ರೇರಣೆ ನೀಡುವುದಿಲ್ಲ, ಅದು ಶಾಂತಿ, ನೆಮ್ಮದಿಯನ್ನೇ ಬಯಸುತ್ತದೆ ಎಂದು ಬೆಂಗಳೂರಿನ ರಾಮೋಹಳ್ಳಿಯ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಯೋಗೇಶ್ವರಾನಂದಜೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗಟ್ಟಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಿಂದ ಶನಿವಾರ ರಥೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಭಕ್ತಿ, ಶ್ರದ್ಧೆಯಿಂದ ಯಾವುದೇ ಕೆಲಸ ಮಾಡಿದರೂ ಅದು ದೈವ ಪೂಜೆಗೆ ಸಮನಾಗಿದ್ದು ಉತ್ತಮ ಫಲ ಸಿಗುತ್ತದೆ ಎಂದರು.
ಭಕ್ತರಲ್ಲೇ ಶ್ರೇಷ್ಟ ಹನುಮನಾಗಿದ್ದು, ಶ್ರೀರಾಮನನ್ನು ಹೃದಯದಲ್ಲೇ ತೋರಿಸಿದ ಆತನ ಭಕ್ತಿಗೆ ಸಮರಿಲ್ಲ. ಹನುಮ ಪ್ರತಿಯೊಬ್ಬರ ಆರಾಧ್ಯ ದೈವ ಮಾತ್ರವಲ್ಲ. ನಮ್ಮಲ್ಲಿನ ಭಯ ಹೋಗಲಾಡಿಸುವ ಮಹಾನ್ ಶಕ್ತಿ ಎಂದು ತಿಳಿಸಿದರು.
ದೇವರಿಲ್ಲ ಎಂಬುದು ಮೂರ್ಖತನ. ಆದರೆ ಧರ್ಮ, ದೇವರು ಇದ್ದಾನೆ ಎಂಬ ವಿಶ್ವಾಸವೇ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತಿದೆ. ಧರ್ಮದ ವಿರುದ್ಧ ಹೇಳಿಕೆಗಳಿಗೆ ಯಾರು ಕಿವಿಗೋಡಬಾರದು ಎಂದು ಸಲಹೆ ನೀಡಿದರು.
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸದಾ ಒತ್ತಡದಲ್ಲೇ ಜೀವನ ನಡೆಯುತ್ತಿದ್ದು, ಸ್ವಲ್ಪ ಸಮಯವಾದರೂ ದೇವರ ಸ್ಮರಣೆ ಮಾಡುವುದು ಅಗತ್ಯ ಎಂದರು.
ತುಮಕೂರಿನ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಯೋಗೇಶ್ವರಾನಂದಜೀ ಮಾತನಾಡಿ, ಧರ್ಮ-ಅಧರ್ಮಗಳ ನಡುವಿನ ಹೋರಾಟದಲ್ಲಿ ಧರ್ಮಕ್ಕೆ ಮಾತ್ರವೇ ಜಯ ಸಿಗುತ್ತದೆ. ಅಧರ್ಮಕ್ಕೆ ಸಿಗುವ ಜಯ ತಾತ್ಕಾಲಿಕವಾಗಿದ್ದು, ಇದನ್ನು ಅರಿತು ಪ್ರತಿಯೊಬ್ಬರೂ ಸರಿದಾರಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಆಂಜನೇಯಸ್ವಾಮಿ ಜೀವನ ಪರ್ಯಂತ ಶ್ರೀರಾಮನ ಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟವರು. ಇಂದು ರಾಮನ ದೇಗುಲವಿಲ್ಲದಿದ್ದರೂ ನಾವು ಎಲ್ಲೆಲ್ಲೆಯೂ ಹನುಮನ ದೇಗುಲ ಕಾಣುತ್ತೇವೆ. ಹನುಮ ತನ್ನ ಭಕ್ತಿಯಿಂದ ತನ್ನ ಆರಾಧ್ಯ ದೈವ ರಾಮನಿಗಿಂತಲೂ ಹೆಚ್ಚು ಪ್ರಚಲಿತನಾಗಿದ್ದಾನೆ ಎಂದು ವಿವರಿಸಿದರು.