ಕೋಲಾರ: ಚೀನಾ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ದೇಶದ ಯೋಧರ ಸ್ಮರಣಾರ್ಥ ಮಾಜಿ ಯೋಧರ ಟ್ರಸ್ಟ್ ಸದಸ್ಯರು ಇಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಟ್ರಸ್ಟ್ನ ಸದಸ್ಯರು ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹುತಾತ್ಮರ ಗುಣಗಾನ ಮಾಡಿದರು.
‘ಚೀನಾ ದೇಶವು ಗಡಿ ವಿಚಾರದಲ್ಲಿ ಅನಗತ್ಯವಾಗಿ ಸಂಘರ್ಷಕ್ಕೆ ಇಳಿದಿದೆ. ಚೀನಾದ ಆಕ್ರಮಣಕಾರಿ ಧೋರಣೆ ಖಂಡನೀಯ. ಚೀನಾ ತನ್ನ ನೆಲದಲ್ಲಿ ಉತ್ಪಾದನೆಯಾದ ಉತ್ಪನ್ನಗಳನ್ನು ಭಾರತಕ್ಕೆ ಮಾರಿ ಅದರಿಂದ ಬಂದ ಹಣದಿಂದಲೇ ಭಾರತದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.
‘ದೇಶದ ಜನರು ಚೀನಾ ಉತ್ಪನ್ನಗಳನ್ನು ದಿಕ್ಕರಿಸುವ ಮೂಲಕ ತಕ್ಕ ಉತ್ತರ ನೀಡಬೇಕು. ಚೀನಾ ಉತ್ಪನ್ನಗಳನ್ನು ಖರೀದಿಸದೆ ದೇಸಿ ಉತ್ಪನ್ನಗಳನ್ನು ಬಳಕೆ ಮಾಡಬೇಕು. ಜೀವದ ಹಂಗು ತೊರೆದು ಹುತಾತ್ಮರಾಗಿರುವ ಯೋಧರ ಬಲಿದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ’ ಎಂದು ಸ್ಮರಿಸಿದರು.
‘ಚೀನಾ ದುಷ್ಟ ರಾಷ್ಟ್ರವಾಗಿದೆ. ಬೆನ್ನಿಗೆ ಚೂರಿ ಹಾಕುವ ಚೀನಾಕ್ಕೆ ತಕ್ಕ ಪಾಠ ಕಲಿಸಲು ದೇಶದ ಸೇನೆ ಸಶಕ್ತವಾಗಿದೆ. ಭಾರತ ಶಾಂತಿ ಬಯಸುತ್ತದೆ. ಆದರೆ, ತನ್ನ ಸಾರ್ವಭೌಮತೆಗೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದನ್ನು ದೇಶದ ಯೋಧರು ಚೀನಾ ಸೈನಿಕರಿಗೆ ತೋರಿಸಿಕೊಟ್ಟಿದ್ದಾರೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅಭಿಪ್ರಾಯಪಟ್ಟರು.
ನಿಷೇಧಿಸಬೇಕು: ‘ಚೀನಾ ತನ್ನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದರೆ, ಗಡಿ ವಿಚಾರವಾಗಿ ಅನಗತ್ಯ ವಿವಾದ ಸೃಷ್ಟಿಸಿ ಭಾರತಕ್ಕೆ ದ್ರೋಹ ಬಗೆಯುತ್ತಿದೆ. ದುಷ್ಟ ರಾಷ್ಟ್ರ ಚೀನಾದ ವಸ್ತುಗಳನ್ನು ಭಾರತದಲ್ಲಿ ನಿಷೇಧಿಸಬೇಕು’ ಎಂದು ಮಾಜಿ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ ಒತ್ತಾಯಿಸಿದರು.
ಡಿವೈಪಿಸಿ ಮೋಹನ್ ಬಾಬು, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ ಪಾಲ್ಗೊಂಡರು.