ಕೋಲಾರ: ‘ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀರಾಮ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣವು ಅನ್ಯ ಕೋಮಿನವರ ವ್ಯವಸ್ಥಿತ ಪಿತೂರಿ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಶ್ರೀರಾಮಸೇನೆಯು ರಾಮನವಮಿ ಅಂಗವಾಗಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಳಬಾಗಿಲಿನಲ್ಲಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ಮಾಡಿರುವುದು ಪೂರ್ವ ಯೋಜಿತ ಕೃತ್ಯ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಗುಡುಗಿದರು.
‘ಕಿಡಿಗೇಡಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಲ್ಲು ತೂರಾಟ ಮಾಡಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಈ ದುಷ್ಕೃತ್ಯ ಎಸಗಿದ್ದಾರೆ.ಭಾರತ ದೇಶ ಸಂಪೂರ್ಣವಾಗಿ ಹಿಂದೂ ರಾಷ್ಟ್ರ ಆಗಬೇಕು. ಈ ಉದ್ದೇಶಕ್ಕಾಗಿಯೇ ದೇಶದೆಲ್ಲೆಡೆ ಶ್ರೀರಾಮನವಮಿ ಆಚರಿಸಲಾಗುತ್ತಿದೆ’ ಎಂದರು.
‘ಮುತಾಲಿಕ್ ಕೋಲಾರಕ್ಕೆ ಬಂದರೆ ಏನೋ ನಡೆದು ಬಿಡುತ್ತೆ ಎನ್ನುತ್ತಾರೆ. ಆದರೆ, ಅಂತಹ ದೊಡ್ಡ ಅನಾಹುತ ನಡೆಯೋದಿಲ್ಲ. ಸ್ಥಳದಲ್ಲೇ ಇರುವ ಪೊಲೀಸರು ಎಲ್ಲವನ್ನೂ ನಿಭಾಯಿಸುತ್ತಾರೆ’ ಎಂದು ಹೇಳಿದರು.