ಕೋಲಾರ: ‘ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಮೇಲಿನ ಪ್ರಕರಣಗಳನ್ನು 70 ವರ್ಷಗಳಾದರೂ ಹಿಂಪಡೆದಿಲ್ಲ. ಇಂತಹ ಸಂದರ್ಭದಲ್ಲಿ ಉಗ್ರಗಾಮಿ, ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕೆಂದಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಎಂದರೆ ತಪ್ಪಾಗಲಾರದು’ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹುಬ್ಬಳ್ಳಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ, ಪೊಲೀಸರ ಜೀಪ್ಗಳಿಗೆ ಬೆಂಕಿ ಹಾಕಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದರೆ ಏನು ಅರ್ಥ? ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಲ್ಲವೇ’ ಎಂದು ಪ್ರಶ್ನಿಸಿದರು.
‘ತನ್ವೀರ್ ಸೇಠ್ ಅವರನ್ನು ಅವರದ್ದೇ ಸಂಘಟನೆಯವರು ಕೊಲೆ ಮಾಡಲು ಪ್ರಯತ್ನಿಸಿದ್ದರು. ಅದನ್ನು ಸರಿಪಡಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದರು.
‘ಈಸ್ಟ್ ಇಂಡಿಯಾ ಕಂಪನಿ ಮಾಡಿಕೊಂಡಿರುವುದು ಆಲಿಬಾಬ 40 ಕಳ್ಳರು ಎನ್ನುವಂತಿದೆ. ಮುಖ್ಯಮಂತ್ರಿಯಾಗಲು, ಅಧಿಕಾರ ದಾಹಕ್ಕಾಗಿ ಮಾಡಿಕೊಂಡಿದ್ದಾರೆ. ಅಮಾಯಕರು, ದಲಿತರ ಕೊಲೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎನ್ನುವುದು ನೋಡಿದಾಗ ಆಲಿಬಾಬ 40 ಕಳ್ಳರ ತಂಡಕ್ಕಿಂತಲೂ ಇವರು ಮಾರಕ ಎನಿಸಿದ್ದಾರೆ. ಇಂಡಿಯಾ ಎಂಬ ಹೆಸರು ಇಟ್ಟುಕೊಂಡು ದೇಶದ್ರೋಹಿ ಚಟುವಟಿಕೆ ಮಾಡುವವರನ್ನು ಸೇರಿಸಿಕೊಂಡರೆ ಅವರ ಚಲನವಲನಗಳು ಬದಲಾಗುತ್ತದೆ ಎಂದು ಭಾವಿಸಿದ್ದರೆ ಅವರಷ್ಟು ದಡ್ಡರು ಯಾರೂ ಇರುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಕಾಂಗ್ರೆಸ್ಸಿನವರಲ್ಲೇ ಆಂತರಿಕ ಆಪರೇಷನ್ ನಡೆಯುತ್ತಿವೆ. ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ ಅವರದ್ದೇ ಪ್ರತ್ಯೇಕ ತಂಡಗಳಿವೆ. ಡಿಸೆಂಬರ್ ಒಳಗೆ ಸರ್ಕಾರದ ಆಯಸ್ಸು ಮುಗಿಯುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.