ಕೋಲಾರ: ತಾಲ್ಲೂಕಿನ ಶೆಟ್ಟಿಮಾದಮಂಗಲ ಗೇಟ್ ಸಮೀಪ ಸೋಮವಾರ ಸಂಜೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ 6 ಕುರಿಗಳು ಮೃತಪಟ್ಟಿವೆ.
ಶೆಟ್ಟಿಮಾದಮಂಗಲ ಗ್ರಾಮದ ರೈತ ಆಂಜಿನಪ್ಪ 18 ಕುರಿಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಕೋಲಾರ ಕಡೆಗೆ ಬರುತ್ತಿದ್ದ ಟೆಂಪೊ ಡಿಕ್ಕಿ ಹೊಡೆದಿದೆ. ಚಾಲಕ ಟೆಂಪೊ ಸಮೇತ ಪರಾರಿಯಾಗಿದ್ದಾನೆ.
ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು, ಮೂರಂಡಹಳ್ಳಿ ಕ್ರಾಸ್ ಬಳಿಗೆ ಪೊಲೀಸರನ್ನು ಕಳುಹಿಸಿದ್ದಾರೆ. ಆದರೆ, ಟೆಂಪೊ ಚಾಲಕ ಬೇರೆ ಮಾರ್ಗದಲ್ಲಿ ತೆರಳಿದ್ದು, ಪತ್ತೆಯಾಗಿಲ್ಲ.
ರೈತನಿಗೆ ಸುಮಾರು ₹ 55 ಸಾವಿರ ನಷ್ಟ ಉಂಟಾಗಿದ್ದು, ಈ ಮಾರ್ಗದ ಗ್ರಾಮಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಂಜಿನಪ್ಪ ದೂರು ದಾಖಲಿಸಿದ್ದಾರೆ.