ಕೆಜಿಎಫ್: ‘ಹಿರಿಯರ ಮಾರ್ಗದರ್ಶನ ಇಲ್ಲದೆ ಹೋದರೆ ಜೀವನ ನರಕ ಸದೃಶವಾಗುತ್ತದೆ. ಅವರ ಅನುಭವವನ್ನು ಪಡೆದು ಉತ್ತಮ ಜೀವನ ನಡೆಸಬೇಕು’ ಎಂದು 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಹೇಳಿದರು.
ನ್ಯಾಯಾಲಯದಲ್ಲಿ ಶನಿವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂದೆ, ತಾಯಿ ತಮಗೆ ಕಷ್ಟವಾದರೂ ಮಕ್ಕಳು ಕಷ್ಟಪಡಬಾರದು ಎಂದು ತಮ್ಮ ಸುಖವನ್ನು ಧಾರೆ ಎರೆಯುತ್ತಾರೆ. ತಮ್ಮ ಹೊಟ್ಟೆ ತುಂಬದೆ ಇದ್ದರೂ, ಮಕ್ಕಳಿಗೆ ವಿವಿಧ ರೀತಿಯಲ್ಲಿ ತ್ಯಾಗ ಮಾಡುತ್ತಾರೆ. ಮಕ್ಕಳು ಮದುವೆಯಾಗುವ ತನಕ ಚೆನ್ನಾಗಿರುತ್ತಾರೆ. ಮದುವೆಯಾದ ನಂತರ ತಂದೆ, ತಾಯಿಯನ್ನು ಕಡೆಗಣಿಸುತ್ತಾರೆ ಎಂದು ತಿಳಿಸಿದರು.
ಈಚಿನ ದಿನಗಳಲ್ಲಿ ಹಿರಿಯರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ. ನಮಗಿಂತ ಹೆಚ್ಚು ವಸಂತಗಳನ್ನು ನೋಡಿ, ಅನುಭವದಲ್ಲಿ ಪಕ್ವವಾಗಿರುವ ಅವರನ್ನು ನಿಕೃಷ್ಟ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನ್ಯಾಯಾಧೀಶರಾದ ಮಹೇಶ ಶಂ. ಪಾಟೀಲ, ರಹಿಂ ಆಲಿ ಮೌಲಾಸಾಬ್ ನದಾಫ್, ಆರ್. ಮಂಜುನಾಥ್, ವಿನೋದ್ ಕುಮಾರ್, ಎಂ. ಮಂಜು, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ವೆಂಕಟರಾಮಯ್ಯ, ಮಣಿವಣ್ಣನ್, ಕೆ.ಸಿ. ನಾಗರಾಜ್ ಹಾಜರಿದ್ದರು.