ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟಿನ ನಡುವೆ ಮತಾಂತರ ಜಾಲ: ಗುಜರಾತ್, ಕೋಲಾರ, ಪಾದರಾಯನಪುರ ನಂಟು

ಸೂರತ್‌ನಿಂದ ಬಂದವರ ಜಾಡು ಹಿಡಿದ ಜಿಲ್ಲಾಡಳಿತ
Last Updated 9 ಮೇ 2020, 4:19 IST
ಅಕ್ಷರ ಗಾತ್ರ

ಕೋಲಾರ: ಗುಜರಾತ್‌ನ ಸೂರತ್‌ನಿಂದ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಬಂದಿರುವ 44 ಮಂದಿಯ ಜಾಡು ಹಿಡಿದು ಹೊರಟ ಜಿಲ್ಲಾಡಳಿತಕ್ಕೆ ಮತಾಂತರ ಜಾಲದ ಸ್ಫೋಟಕ ಸುಳಿವು ಸಿಕ್ಕಿದ್ದು, ಈ ಸಂಬಂಧ ಮಾಲೂರು ಠಾಣೆಗೆ ದೂರು ನೀಡಲಾಗಿದೆ.

ಮೂಲತಃ ಮಾಲೂರು ತಾಲ್ಲೂಕಿನವರು ಎಂದು ಹೇಳಿಕೊಂಡಿರುವ ಈ 44 ಮಂದಿಯು ಮಾರ್ಚ್‌ 8ರಂದು ಧರ್ಮ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಿದ್ದರು. ಬಳಿಕ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಹಿಂದಿರುಗಲಾಗದೆ ಅವರೆಲ್ಲರೂ ಗುಜರಾತ್‌ನಲ್ಲೇ ಸಿಲುಕಿಕೊಂಡಿದ್ದರು.

ಲಾಕ್‌ಡೌನ್‌ ಸಡಿಲಿಕೆಯಾದ ಬೆನ್ನಲ್ಲೇ ಗುಜರಾತ್‌ ಸರ್ಕಾರವು 44 ಮಂದಿಯನ್ನೂ ಬಸ್‌ನಲ್ಲಿ ಮೇ 3ರಂದು ಮಾಲೂರಿಗೆ ಕಳುಹಿಸಿಕೊಟ್ಟಿತ್ತು. ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದೆ.

44 ಮಂದಿಯ ಪೂರ್ವಾಪರ ಪತ್ತೆಗಾಗಿ ಜಿಲ್ಲಾಡಳಿತವು ಎಲ್ಲರ ಆಧಾರ್‌ ಕಾರ್ಡ್‌ ಪ್ರತಿ ಸಂಗ್ರಹಿಸಿ ಪರಿಶೀಲನೆ ಮಾಡಿದ್ದು, ಈ ಪೈಕಿ 15ಕ್ಕೂ ಹೆಚ್ಚು ಮಂದಿ ಸ್ಥಳೀಯರಲ್ಲ ಎಂಬ ಸಂಗತಿ ಗೊತ್ತಾಗಿದೆ. ಉತ್ತರ ಪ್ರದೇಶ, ತಮಿಳುನಾಡು ಹಾಗೂ ಬೆಂಗಳೂರು ನಿವಾಸಿಗಳಾಗಿದ್ದರೂ ಸುಳ್ಳು ಮಾಹಿತಿ ಕೊಟ್ಟು ಜಿಲ್ಲೆಗೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಹಿಂದೂ ಧರ್ಮೀಯ

44 ಮಂದಿ ಪೈಕಿ ಕಾರ್ತಿಕ್‌ ಮುನಿಯೇಂದ್ರ ಎಂಬುವರು ಮೂಲತಃ ತಮಿಳುನಾಡಿನವರೆಂದು ಗೊತ್ತಾಗಿದ್ದು, ಅವರ ಆಧಾರ್ ಕಾರ್ಡ್‌ನಲ್ಲೂ ತಮಿಳುನಾಡಿನ ವಿಳಾಸವಿದೆ. ಅಧಿಕಾರಿಗಳ ವಿಚಾರಣೆ ವೇಳೆ ಕಾರ್ತಿಕ್‌ ತಮ್ಮ ಹೆಸರು ಸಾದಿಕ್‌ ಎಂದು ಹೇಳಿಕೊಂಡಿದ್ದು, ಹಿಂದೂ ಧರ್ಮೀಯರಾದ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರುವ ಸಂಗತಿ ಬಯಲಾಗಿದೆ.

ಕಾರ್ತಿಕ್‌ ಜತೆಗೆ ಸೂರತ್‌ನಿಂದ ಬಂದಿರುವ ಮಹಮ್ಮದ್‌ ಹಮ್ಜಾ ಮತ್ತು ಸಮೀರ್‌ ಎಂಬುವರು ಮೂಲತಃ ಉತ್ತರಪ್ರದೇಶದವರು ಹಾಗೂ ಸೈಯದ್‌ ರಿಜ್ವಾನ್‌ ಎಂಬುವರು ಬೆಂಗಳೂರಿನ ಪಾದರಾಯನಪುರದವರೆಂದು ಆಧಾರ್‌ ಕಾರ್ಡ್‌ಗಳ ಪರಿಶೀಲನೆಯಿಂದ ಗೊತ್ತಾಗಿದೆ. ಮಾಲೂರು ಪಟ್ಟಣದ ಕುಂಬಾರಪೇಟೆಯ ಸೈಯದ್‌ ಉಸ್ಮಾನ್‌ ಎಂಬಾತ ಈ 4 ಮಂದಿಯ ವಾಸ ಸ್ಥಳದ ಮಾಹಿತಿ ಮರೆಮಾಚಿ ಮಾಲೂರಿಗೆ ಕರೆತಂದಿರುವುದು ಅಧಿಕಾರಿಗಳ ವಿಚಾರಣೆಯಿಂದ ಬಯಲಾಗಿದೆ.

ಈ ಸಂಬಂಧ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಮಾಲೂರು ತಹಶೀಲ್ದಾರ್‌ ಮಂಜುನಾಥ್‌ ಅವರು ಕಾರ್ತಿಕ್‌, ಮಹಮ್ಮದ್‌ ಹಮ್ಜಾ, ಸಮೀರ್‌, ಸೈಯದ್‌ ರಿಜ್ವಾನ್‌ ಮತ್ತು ಸೈಯದ್‌ ಉಸ್ಮಾನ್‌ ವಿರುದ್ಧ ಮಂಗಳವಾರ (ಮೇ 5) ಮಾಲೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡಿದ್ದು, ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT