ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ಬಗ್ಗೆ ಬೇಕಂತಲೇ ಉತ್ಪ್ರೇಕ್ಷೆ: ಕೆ.ಆರ್. ರಮೇಶ್‌ಕುಮಾರ್ ಅಸಮಾಧಾನ

Last Updated 5 ಜೂನ್ 2019, 11:23 IST
ಅಕ್ಷರ ಗಾತ್ರ

ಕೋಲಾರ: ‘ಮಂಗಳೂರು ಭಾಗದ ದೇವಾಲಯಗಳಲ್ಲಿ ಪೂಜೆಗೂ ನೀರಿಲ್ಲ ಎನ್ನುವ ವಿಚಾರ ಕೇಳಿಬಂದಿದ್ದು, ಅದಕ್ಕೂ ಎತ್ತಿನಹೊಳೆ ಯೋಜನೆಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಧಾನಸಭಾಕ್ಷ ಕೆ.ಆರ್.ರಮೇಶ್‌ ಕುಮಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೀರಾವರಿ, ನಿಸರ್ಗದ ತೊಂದರೆಗೂ ಯೋಜನೆಗೂ ಯಾವುದೇ ಸಂಬಂಧವಿಲ್ಲ, ಆದರೂ ಕೆಲವರು ಬೇಕಂತಲೇ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಎತ್ತಿನಹೊಳೆಗೆ ಸಂಬಂಧಿಸಿದಂತೆ ಆ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದು ನಿಜ. ಅವರೂ ನಮ್ಮ ಅಣ್ಣತಮ್ಮಂದಿರೇ, ಹೀಗಾಗಿ ಅವರ ಮನವೊಲಿಸಲಾಗಿದ್ದು, ಎಲ್ಲ ಸಹಕಾರ ನೀಡುತ್ತಿದ್ದಾರೆ’ ಎಂದರು.

‘ಕರಾವಳಿ ಭಾಗದಲ್ಲಿ ಬೀಳುವಂತಹ ಮಳೆ ಸುಮಾರು 450 ಟಿಎಂಸಿ ನೀರು ಅರಬ್ಬೀಸಮುದ್ರಕ್ಕೆ ಸೇರುತ್ತಿದೆ. 65 ವರ್ಷಗಳ ಇತಿಹಾಸದ ಅಂಕಿಅಂಶಗಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲಿ ಸಕಲೇಶಪುರದ ಸಮೀಪ ಅಂದಾಜು 35 ಟಿಎಂಸಿ ಲಭ್ಯವಾಗಲಿದೆ ಎನ್ನುವುದು ತಿಳಿದುಬಂದಿದ್ದು, ಅಲ್ಲಿ ಹರಿದುಹೋಗುವ ನೀರಿಗೆ ಅಡ್ಡಲಾಗಿ ಗೋಡೆಯನ್ನು ಕಟ್ಟಿ ಈ ಭಾಗಕ್ಕೆ ಅವಶ್ಯವಿರುವ 24 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಎತ್ತಿನಹೊಳೆ ಕಾಮಗಾರಿ ಅತಿವೇಗವಾಗಿ ಕೆಲಸ ನಡೆಯುತ್ತಿದೆ. ಜೂ.11ರಂದು ಸ್ಥಳ ಪರಿಶೀಲನೆಗೆ ತೆರಳುತ್ತಿದ್ದೇವೆ. ತಿಪಟೂರು, ಚಿಕ್ಕನಾಯನಕನಹಳ್ಳಿ ಶಾಸಕರಿಗೆ ಇದ್ದ ಆಕ್ಷೇಪಗಳನ್ನು ಬಗೆಹರಿಸಲಾಗಿದೆ’ ಎಂದು ಹೇಳಿದರು.

ಸರ್ಕಾರದ ವಿರುದ್ಧ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸದ ರಮೇಶ್‌ಕುಮಾರ್, ‘ನಾನು ಯಾವುದೇ ಪತ್ರ ಬರೆದಿಲ್ಲ ಎಂದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ಸಲ್ಲಿಸುವ ಬಗ್ಗೆಯೂ ನನಗೆ ಗೊತ್ತಿಲ್ಲ’ ಎಂದರು.

‘ಎತ್ತಿನಹೊಳೆ, ಕೆಸಿವ್ಯಾಲಿ, ಅರಣ್ಯ ಇಲಾಖೆ, ರೈತರ ವಿಚಾರ ಮಾತನಾಡಿದ್ದೇನೆ ಅಷ್ಟೇ. ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT