ಕೋಲಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂರು ಚಾಲಾಕಿ ಮಹಿಳೆಯರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 80 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಪುಂಗನೂರಿನ ಭಗತ್ ಸಿಂಗ್ ಕಾಲೊನಿ ನಿವಾಸಿಗಳಾದ ಸಾವಿತ್ರಿ (35), ಶ್ಯಾಮಲಾ (25) ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಈಗಲಾಟಪಲ್ಲಿ ಗ್ರಾಮದ ಲಕ್ಷ್ಮಿದೇವಿ (38) ಬಂಧಿತ ಆರೋಪಿಗಳು.
ಮನೆಗಳ ಬಳಿ ಕೂದಲು, ಹಳೆ ಪಾತ್ರೆ ಖರೀದಿಸುವ ಹಾಗೂ ಅದೇ ನೆಪದಲ್ಲಿ ಬಸ್ಗಳಲ್ಲಿ ಸಂಚರಿಸಲು ಬಸ್ ನಿಲ್ದಾಣಕ್ಕೆ ಬಂದು ಕಳ್ಳತನದಲ್ಲಿ ತೊಡಗಿದ್ದರು. ಪ್ರಕರಣ ದಾಖಲಿಸಿ ಬ್ಯಾಗ್ ಕತ್ತರಿಸಲು ಬಳಸುತ್ತಿದ್ದ ಸರ್ಜಿಕಲ್ ಬ್ಲೇಡ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ವಿಪರೀತ ರಶ್ ಆಗುವ ಬಸ್ಗಳಲ್ಲಿ ಹತ್ತಿ ಇಳಿಯುವ ಪ್ರಯಾಣಿಕರ ಬ್ಯಾಗ್ಗಳಿಂದ ಚಿನ್ನಾಭರಣ ಕದಿಯುತ್ತಿದ್ದರು. ಪದೇಪದೇ ದೂರು ಬಂದ ಹಿನ್ನೆಲೆಯಲ್ಲಿ ನಿಲ್ದಾಣದ ವಿವಿಧೆಡೆ 20 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ನಿಲ್ದಾಣದಲ್ಲಿ ಪೊಲೀಸ್ ಹೊರಠಾಣೆ ತೆರೆದು ಸಿಬ್ಬಂದಿ ನಿಯೋಜಿಸಿ, ಕಳ್ಳರ ಮೇಲೆ ಪ್ರಯಾಣಿಕರ ಸೋಗಿನಲ್ಲಿ ನಿಗಾ ಇಡಲಾಗಿತ್ತು.
ಅ.26, 28ರಂದು ಸಂಶಯಾಸ್ಪದವಾಗಿ ಬಸ್ ಹತ್ತಿ ಇಳಿಯುವುದು, ಸುಖಾಸುಮ್ಮನೇ ನೂಕು ನುಗ್ಗಲು ಉಂಟು ಮಾಡುವುದು ಮಾಡುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ವಿಚಾರ ಬಯಲಾಗಿದೆ ಎಂದಿದ್ದಾರೆ.
ಕೋಲಾರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆ ಇನ್ಸ್ಪೆಕ್ಟರ್ ಹರೀಶ್, ಪಿಎಸ್ಐ ಸೈಯದ್ ಖಾಸಿಂ, ಮಹಿಳಾ ಪಿಎಸ್ಐ ಹೇಮಲತಾ, ಬಸ್ ನಿಲ್ದಾಣದ ಹೊರ ಠಾಣೆ ಸಿಬ್ಬಂದಿ ಕಿಶೋರ್, ಮಹಿಳಾ ಸಿಬ್ಬಂದಿ ಅರ್ಚನಾ, ಅನಿತಾ, ಶಿಲ್ಪಾ, ಅಪರಾಧ ವಿಭಾಗದ ಸಿಬ್ಬಂದಿ ಮೋಹನ್, ನಾರಾಯಣಸ್ವಾಮಿ, ವೆಂಕಟಾಚಲಪತಿ, ಶ್ರೀನಾಥ್ ಇದ್ದರು,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.