ಮಾಲೂರು: ಒಕ್ಕೂಟವು ರೈತರು ನೀಡುವ ಹಾಲಿನಲ್ಲಿ ಲಾಭ ಪಡೆದು ಹಾಲು ಉತ್ಪಾದಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದುಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೃತ ರಾಸು ಗಳಿಗೆ ಜೀವ ವಿಮೆ ಹಣ ಹಾಗೂ ನಿವೃತ್ತಿ ಹೊಂದಿರುವ ಸಿಬ್ಬಂದಿಗಳನ್ನು ಗೌರವಿಸಿ ಮಾತನಾಡಿದರು.
ಹಾಲು ಉತ್ಪಾದನೆ ಹೆಚ್ಚಿಸುವ ಮೂಲಕ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಇದರಿಂದ ಹಾಲು ಉತ್ಪಾದಕ ಸಂಘಗಳು ಹಾಗೂ ಕೋಚಿಮುಲ್ ಲಾಭದಾಯಕ ವಾಗಿರುತ್ತದೆ. ಕೋಚಿಮುಲ್ ಒಕ್ಕೂಟದ ಸದಸ್ಯ ಹಾಗೂ ಅಧ್ಯಕ್ಷರಾಗಿ ಹಾಲು ಉತ್ಪಾದಕರ ಹಾಗೂ ರೈತರ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯ ರೂಪಕ್ಕೆ ತರಲಾಗಿದೆ ಎಂದರು.
ಹಾಲು ಉತ್ಪಾದಕ ರೈತರಿಗೆ ₹2 ಲಕ್ಷ ಜೀವ ವಿಮೆ, ರಾಸುಗಳಿಗೆ ₹30 ಸಾವಿರದಿಂದ ₹70 ಸಾವಿರದವರೆಗೆ ನೀಡಲಾಗುತ್ತಿದೆ. ಹಾಲು ಕರೆಯುವ ಯಂತ್ರಗಳು ಬಿಎಂಸಿಗಳ ನಿರ್ಮಾಣ, ನೂತನ ಕಟ್ಟಡಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮೃತ 33 ರಾಸುಗಳಿಗೆ ಜೀವವಿಮೆ ತಲಾ ₹60 ಸಾವಿರದಂತೆ ನೀಡಲಾಯಿತು. 16 ಮಂದಿ ನಿವೃತ್ತಿ ಹೊಂದಿರುವ ಸಿಬ್ಬಂದಿಗೆ ಗೌರವಧನ ವಿತರಿಸಲಾಯಿತು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಗೋರ್ವಧನ್ ರೆಡ್ಡಿ, ಉಪ ವ್ಯವಸ್ಥಾಪಕ ಡಾ.ಚೇತನ್, ಮುಖಂಡ ಪರಮೇಶ್, ಅಂಜಿನಿ ಸೋಮಣ್ಣ, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ನಾರಾಯಣಸ್ವಾಮಿ, ಮರಿಸ್ವಾಮಿ ಇದ್ದರು.