ಕೋಲಾರ: ‘ದ್ರಾವೀಡ ಸಂಸ್ಕೃತಿಯೂ ಸ್ಥಳೀಯ ಮೂಲವಾಗಿದ್ದು, ಪೂರ್ವಿಕ ಜಲ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಅಗ್ನಿ ಸಂಸ್ಕೃತಿಯಾಗಿ ಪರಿವರ್ತನೆಗೊಂಡಿದೆ’ ಎಂದು ಸಾಹಿತಿ ಲಕ್ಷ್ಮಿಪತಿ ಕೋಲಾರ ಕಳವಳ ವ್ಯಕ್ತಪಡಿಸಿದರು.
ನಗರ ಹೊರವಲಯದ ಆದಿಮ ಸಂಸ್ಕೃತಿ ಕೇಂದ್ರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಭಾನುವಾರ ನಡೆದ ಸಂಸ್ಕೃತಿ ಇತಿಹಾಸದ ಮರೆವು ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮೂಲ ನಿವಾಸಿಗಳು ಜಲಕ್ಕೆ ದೇವರ ಸ್ಥಾನವನ್ನು ನೀಡಿದ್ದರು, ಆದರೆ ಇತ್ತೀಚೆಗೆ ಅಗ್ನಿಯನ್ನು ಆರಾಧಿಸುವ ಸಂಸ್ಕೃತಿ ಹೆಚ್ಚಾಗಿ ಬೆಳೆಯುತ್ತಿದೆ ಇದು ನಮ್ಮ ಸಂಸ್ಕೃತಿ ಅಲ್ಲ’ ಎಂದು ಪ್ರತಿಪಾದಿಸಿದರು.
‘ನಮ್ಮ ಮೂಲ ನಿವಾಸಿಗಳು ಲಿಂಗ, ಶಿವ, ರುಧ್ರ ಮುಂತಾದ ದೇವರುಗಳನ್ನು ಪೂಜಿಸುತ್ತಿದ್ದಕ್ಕೆ ಸಾಕಷ್ಟು ಸಾಕ್ಷಿಗಳು ಇವೆ. ಮೂಲ ಸಂಸ್ಕೃತಿಯ ದೇವತೆಗಳು ಮರೆಯಾಗುತ್ತಿವೆ. ನೆಲ ಮೂಲದ ಧರ್ಮವನ್ನು ಹೈಜಾಕ್ ಮಾಡಿ ವೈಷ್ಣವ ಧರ್ಮವನ್ನು ಬಲವಂತವಾಗಿ ಹೇರಲಾಗುತ್ತಿದೆ’ ಎಂದರು.
‘ಆರ್ಯರು ಮಧ್ಯ ಏಷಿಯಾದಿಂದ ಬಂದವರು, ಏಷ್ಯದಿಂದ ವಲಸೆ ಬಂದವರು ಇಲ್ಲಿನ ಮೂಲ ಸಂಸ್ಕೃತಿಗೆ ಧಕ್ಕೆಯನ್ನು ತರುತ್ತಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಅಗ್ನಿ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಕಾರಣ ವೈದಿಕ ಧರ್ಮ’ ಎಂದು ತಿಳಿಸಿದರು.
‘ದೇಶದಲ್ಲಿ ಬಿಜೆಪಿ ಸರ್ಕಾರ ಸಂವಿಧಾನವನ್ನು ಧಿಕ್ಕರಿಸಿ ಏಕಮುಖ ಸಂಸ್ಕೃತಿಯನ್ನು ತರಲು ಹೊರಟಿದೆ, ಅಂಬೇಡ್ಕರ್ ಅವರ ಗುಣಗಾನ ಮಾಡುತ್ತಲೇ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ. ಇದಕ್ಕೆ ನಮ್ಮ ಯುವ ಪೀಳಿಗೆ ಎಚ್ಚೆತ್ತು ಕೊಳ್ಳಬೇಕು. ಶಿವ ಸಂಸ್ಕತಿಯ ಬಗ್ಗೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ‘ನೆಲದ ಸಂಸ್ಕೃತಿಯ ಬಗ್ಗೆ ಲಕ್ಷ್ಮೀಪತಿ ಕೋಲಾರ ಅಧ್ಯಯನ ಮಾಡಿ ಮರೆಯಾಗುತ್ತಿರುವ ಪರಂಪರೆಯನ್ನು ಇಂದಿನ ತಲೆ ಮಾರಿಗೆ ಪರಿಚಯ ಮಾಡುವ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಜಾಗೃತಿ ಮೂಡಬೇಕು’ ಎಂದು ತಿಳಿಸಿದರು.
ನಿವೃತ್ತ ಅಧಿಕಾರಿ ರುಧ್ರಪ್ಪ ಅನಗವಾಡಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಯೋಜಕ ಅಣ್ಣಯ್ಯ, ಜಿಲ್ಲಾ ಮುಖಂಡ ಎನ್.ಮುನಿಸ್ವಾಮಿ, ಸಾಹಿತಿಗಳಾದ ಹಾ.ಮ.ರಾಮಚಂದ್ರಪ್ಪ, ಎಸ್.ವೆಂಕಟರಮಣಪ್ಪ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ಇದ್ದರು.