ಕೋಲಾರ: ‘ಅಂಬೇಡ್ಕರ್ ಅವರು ಶೋಷಿತ ವರ್ಗಗಳು, ಕಾರ್ಮಿಕರು ಹಾಗೂ ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದ ವಿಶ್ವನಾಯಕ. ಆದರೆ, ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ವಿಷಾದಿಸಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ‘ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ದೇಶದಲ್ಲಿ ಶೋಷಿತರಿಗೂ ಅಧಿಕಾರ ಮತ್ತು ಅವಕಾಶ ಸಿಗುವಂತಾಗಿದೆ. ಜತೆಗೆ ಸಮಾನತೆಯ ಸಮಾಜ ನಿರ್ಮಾಣವಾಗಿದೆ’ ಎಂದರು.
‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಂವಿಧಾನ ಸಹಕಾರಿ. ನಾವಿಂದು ನಮಗಾಗಿ ಬದುಕುತ್ತಿದ್ದೇವೆ. ಅಂಬೇಡ್ಕರ್ ಶೋಷಿತರಿಗಾಗಿ ಬದುಕಿದರು. ಅವರ ವಿಚಾರಧಾರೆಯಿಂದಾಗಿ ದೇಶದಲ್ಲಿ ಶಾಂತಿ, ಅಭಿವೃದ್ಧಿ ಕುರಿತು ಸ್ವಷ್ಟ ನಿರ್ಧಾರ ತಳೆಯಲು ಸಾಧ್ಯವಾಗಿದೆ. ಜನರಿಗೆ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ವ್ಯಕ್ತಿತ್ವದ ಅರಿವು ಮುಡಿಸಬೇಕು’ ಎಂದು ಸಲಹೆ ನೀಡಿದರು.
‘ದೇಶದ ಅರ್ಧದಷ್ಟಿರುವ ಮಹಿಳೆಯರಿಗೂ ಆಸ್ತಿ ಹಕ್ಕು ಕಲ್ಪಿಸುವ ಮಸೂದೆಯನ್ನು ಅಂಬೇಡ್ಕರ್ ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ, ಅದಕ್ಕೆ ಒಪ್ಪಿಗೆ ಸಿಗಲಿಲ್ಲ. ಆಗ ತಾತ್ವಿಕ ನೆಲೆಗಟ್ಟಿನಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದರು. ಅಂಬೇಡ್ಕರ್ ತತ್ವಾದರ್ಶದ ಅನುಷ್ಠಾನಕ್ಕೆ ಪರಿಣಾಮಕಾರಿ ಕಾರ್ಯಕ್ರಮಗಳು ನಡೆಯಬೇಕು’ ಎಂದು ಕಿವಿಮಾತು ಹೇಳಿದರು.
‘ಸರ್ಕಾರದ ಸವಲತ್ತುಗಳು ಶೇ 80ರಷ್ಟು ಜನರಿಗೆ ತಲುಪುತ್ತಿಲ್ಲ. ಇದಕ್ಕೆ ಕಾರಣ ಹುಡುಕಿ ಸರಿಪಡಿಸಬೇಕು. ಪರಿವರ್ತನೆಗಾಗಿ ಮೀಸಲಾತಿ ಬೇಕು. ಅದರಲ್ಲಿ ನ್ಯೂನತೆ ಇದ್ದರೆ ಜನರ ಅಭಿಪ್ರಾಯ ಸಂಗ್ರಹಿಸಿ ಸರಿಪಡಿಸುವ ಜವಾಬ್ದಾರಿ ರಾಜಕೀಯ ಪಕ್ಷಗಳದ್ದು ಮತ್ತು ಜನಪ್ರತಿನಿಧಿಗಳದ್ದು’ ಎಂದು ತಿಳಿಸಿದರು.
ರಾಜ್ಯ ಬಯಲುಸೀಮೆ ಅಭಿವೃದ್ಧಿ ಮಂಡಳಿ ಸದಸ್ಯ ಕೆ.ಜಯದೇವ್, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಕಾಂಗ್ರೆಸ್ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಆಂಜಿನಪ್ಪ, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್, ಮುಖಂಡರಾದ ವೆಂಕಟಪತೆಪ್ಪ, ಮುನಿವೆಂಕಟಪ್ಪ ಪಾಲ್ಗೊಂಡಿದ್ದರು.