ಕೋಲಾರ: ‘ದೇಶದಲ್ಲಿನ ಆಹಾರ ಸಮಸ್ಯೆ ಬಗೆಹರಿಸುವ ಶಕ್ತಿ ರೈತರಿಗೆ ಮಾತ್ರ ಇದೆ’ ಎಂದು ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಎಫ್ಇಎಸ್ ಸಾಯಿಲ್ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಮಣ್ಣು ಫಲವತ್ತು ನಿರ್ವಹಣೆ, ಬಿತ್ತನೆ ಬೀಜಗಳ ಸಿದ್ಧತೆ, ಬಹುಬೆಳೆ ವಿಧಾನ ಅಳವಡಿಕೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ರೈತರು ಆಧುನಿಕ ಕೃಷಿ ಆವಿಷ್ಕಾರಗಳ ಬಗ್ಗೆ ಅರಿವು ಹೊಂದಿರಬೇಕಾದ ಅವಶ್ಯಕತೆ ಇದೆ. ರೈತರ ಜೀವನಮಟ್ಟ ಸುಧಾರಿಸಬೇಕಾದರೆ ಸಮಾಜದ ಪ್ರತಿಯೊಬ್ಬರು ಸಹಕರಿಸಬೇಕಾದ ಜವಾಬ್ದಾರಿ ಇದೆ. ದೇಶದ ಅಭಿವೃದ್ಧಿಯ ಸಲುವಾಗಿ ರೈತರು ಸಾವಯುವ ಕೃಷಿಯತ್ತ ಚಿತ್ತ ಹರಿಸಬೇಕು’ ಎಂದು ಸಲಹೆ ನೀಡಿದರು.
ಮೂಲತಃ ಕೃಷಿ ಪದವಿಧರನಾಗಿರುವುದರಿಂದ ರೈತರ ಸಂಕಷ್ಟಗಳ ಬಗ್ಗೆ ಅರಿವಿದೆ. ರೈತರು ಆರ್ಥಿಕವಾಗಿ ಸದೃಢರಾಗಬೇಕಿದೆ. ಆಹಾರ ಪದಾರ್ಥ ಉತ್ಪಾದಿಸುವ ರೈತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಎಂದರು.
ರೈತರು ಬೆಳೆ ಬೆಳೆಯಲು ಬ್ಯಾಂಕ್ನಿಂದ ಅಗತ್ಯ ಸಾಲ ನೀಡುತ್ತಿದ್ದು, ಇದರ ಉಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಜಗದೀಶ್ ಮೂರ್ತಿ ಸಲಹೆ ನೀಡಿದರು.
ದೇಶದಲ್ಲಿ ಕೃಷಿ ವಲಯ ಅತಿ ಹೆಚ್ಚು ಉದ್ಯೋಗವಕಾಶ ಸೃಷ್ಟಿಸುವ ಶಕ್ತಿ ಇರುವುದರಿಂದ ಈ ಕ್ಷೇತ್ರವನ್ನು ಯಾರು ಕಡೆಗಣಿಸುವಂತಿಲ್ಲ. ರೈತರನ್ನು ಯಾರು ಕೀಳರಿಮೆಯಿಂದ ಕಾಣಬಾರದು. ಅವರನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು. ತರಬೇತಿ ಸಂಸ್ಥೆಗಳಲ್ಲಿ ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಸ್ವ ಉದ್ಯೋಗಗಳ ಬಗ್ಗೆ ತರಬೇತಿ ನೀಡಿ ಆಕರ್ಷಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾವಂತರಿಗೆ ಉದ್ಯೋಗದ ಅವಕಾಶ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಎಫ್ಇಎಸ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಕುಮಾರ್ ಮಾತನಾಡಿ, ‘ರೈತರಿಗೆ ಸಾವಯುವ ಕೃಷಿ, ಆಧುನಿಕ ಬೆಳೆ ಪದ್ಧತಿ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ರೈತರು ಆಧುನಿಕ ಪದ್ಧತಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದುಕೊಳ್ಳಬಹುದು. ಒಣ ಬೇಸಾಯ ಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ರಾವ್, ಸಾಯಿಲ್ ಸಂಸ್ಥೆಯ ಮುಖ್ಯಸ್ಥ ವಾಸು, ತರಬೇತಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶಾಸ್ತ್ರಿ, ತರಬೇತುದಾರ ಗಿರೀಶ್ ರೆಡ್ಡಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.