ಶ್ರೀನಿವಾಸಪುರ: ಕೃಷಿ ಕ್ಷೇತ್ರವನ್ನು ಫಲವತ್ತು ಮಾಡುವ ಹೊಂಗೆ ಮರಕ್ಕೆ ಗುಳ್ಳೆ ರೋಗ ಕಾಣಿಸಿಕೊಂಡಿದೆ. ಅಲ್ಲಲ್ಲಿ ಎಲೆಗಳ ಮೇಲೆ ದಟ್ಟವಾಗಿ ಗುಳ್ಳೆಗಳು ಕಾಣಿಸಿಕೊಂಡಿವೆ. ಗುಳ್ಳೆಗಳ ಒಳಗೆ ಬಿಳಿ ಬಣ್ಣದ ಹುಳುಗಳು ಇದ್ದು, ಗಿಡ ಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ.
ಹೊಂಗೆ ಗ್ರಾಮೀಣ ಜನರ ಜೀವನದಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿದೆ. ಹೊಂಗೆ ಸುರುಗು, ಹೊಂಗೆ ಸೊಪ್ಪು, ಹೊಂಗೆ ಹೂವು ಹಾಗೂ ಹೊಂಗೆ ಬೀಜ ಉತ್ಕೃಷ್ಟವಾದ ಗೊಬ್ಬರ. ಹೊಂಗೆ ಎಣ್ಣೆಯನ್ನು ಬಯೋ ಡೀಸೆಲ್ ತಯಾರಿಕೆಯಲ್ಲಿ ಬಳಸಲು ಆರಂಭಿಸಿದ ಮೇಲೆ ಅದಕ್ಕೆ ಇನ್ನಷ್ಟು ಮಾನ್ಯತೆ ಬಂದಿದೆ.
ಹಿಂದೆ ಪ್ರತಿ ಗ್ರಾಮದ ಪ್ರತಿ ಕುಟುಂಬವೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಹೊಂಗೆ ತೋಪುಗಳನ್ನು ಹೊಂದಿರುತ್ತಿದ್ದವು. ಅವು ಹೊಲ ಗದ್ದೆಯ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದವು. ಆದರೆ ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚಿದಂತೆ ಹೊಂಗೆ ತೋಟಗಳು ಮೂಲೆ ಗುಂಪಾದವು. ಮರಗಳನ್ನು ಕಡಿದು ಇಟ್ಟಿಗೆ ಸುಡಲಾಯಿತು. ಉರುವಲಿಗಾಗಿಯೂ ಮರಗಳನ್ನು ಕಡಿಯಲಾಯಿತು. ಈಗ ಹೊಂಗೆ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮಾವು, ಹಲಸು ಮುಂತಾದ ಹಣ್ಣಿನ ಮರಗಳನ್ನು ಬೆಳೆಸುವ ಭರದಲ್ಲಿ ಹೊಂಗೆ ಮರಗಳನ್ನು ನಿರ್ಲಕ್ಷಿಸಲಾಗಿದೆ.
ಈಗ ಹೊಂಗೆ ಬೀಜಕ್ಕೆ ಬೇಡಿಕೆಯೊಂದಿಗೆ ಬೆಲೆಯೂ ಬಂದಿದೆ. ಇರುವ ಮರಗಳಲ್ಲಿನ ಕಾಯಿ ಮತ್ತಿತರ ಉತ್ಪನ್ನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿ ತಾವೇ ತಾವಾಗಿ ಹೊಂಗೆ ಮರಗಳು ಬೆಳೆಯುತ್ತಿವೆ. ಆದರೆ ಅವುಗಳನ್ನು ಬೆಳೆಯಲು ಬಿಡುತ್ತಿಲ್ಲ. ಈಗ ಗುಳ್ಳೆ ರೋಗ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ.