ಕೊಪ್ಪಳ: ಒಂದು ವರ್ಷದ ಹಿಂದೆ ಆರಂಭವಾದ ಕೊಪ್ಪಳ ವಿಶ್ವವಿದ್ಯಾಲಯವು ಗಂಗಾವತಿಯಲ್ಲಿ ನೂತನ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಆರಂಭಿಸಿದೆ.
ಹೊಸ ಕೇಂದ್ರದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಎಂಕಾಂ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೊಪ್ಪಳ ವಿ.ವಿ. ಕುಲಪತಿ ಪ್ರೊ. ಬಿ.ಕೆ. ರವಿ ತಿಳಿಸಿದ್ದಾರೆ.
‘ತಾತ್ಕಾಲಿಕವಾಗಿ ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸ್ನಾತಕೋತ್ತರ ಕೇಂದ್ರ ಕಾರ್ಯ ಆರಂಭಿಸಲಿದೆ. ಕಾರಟಗಿ ಹಾಗೂ ಕನಕಗಿರಿ ಭಾಗದ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ಬರಲು ದೂರವಾಗುತ್ತದೆ ಎನ್ನುವ ಕಾರಣಕ್ಕೆ ಹೊಸ ಕೇಂದ್ರ ಗಂಗಾವತಿಯಲ್ಲಿ ಆರಂಭಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ದಿನಾಂಕ ವಿಸ್ತರಣೆ: 2023–24ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಡಿ. 14ರ ತನಕ ವಿಸ್ತರಿಸಲಾಗಿದೆ. ಮೊದಲು ಡಿ. 3 ಕೊನೆಯ ದಿನವಾಗಿತ್ತು.
ಜಿಲ್ಲೆಯಲ್ಲಿ ಈಗಾಗಲೇ ಯಲಬುರ್ಗಾದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದ್ದು, ಗಂಗಾವತಿಯಲ್ಲಿ ಆರಂಭಿಸಲು ಅನುಮತಿ ಲಭಿಸಿದ್ದರಿಂದ ಜಿಲ್ಲೆಗೆ ಎರಡು ಕೇಂದ್ರಗಳು ಲಭಿಸಿದಂತಾಗಿವೆ.