ಮುನಿರಾಬಾದ್: ಬೇವಿನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.
ಕೊಪ್ಪಳ ಕಡೆ ಹೊರಟಿದ್ದ ಸರಕು ಸಾಗಿಸುವ ವಾಹನ ಮತ್ತು ಲಘು ಪ್ರಯಾಣಿಕರ ವಾಹನ ಪರಸ್ಪರ ಉಜ್ಜಿಕೊಂಡ ಪರಿಣಾಮ ಪ್ರಯಾಣಿಕರ ವಾಹನ ರಸ್ತೆ ವಿಭಜಕ ದಾಟಿ ಬಲ ಬದಿಗೆ ಹೋಗಿದೆ.
ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಕುಕನೂರು–ಧರ್ಮಸ್ಥಳ ಬಸ್ ಪ್ರಯಾಣಿಕರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಇಬ್ಬರು ಅಸು ನೀಗಿದ್ದಾರೆ.
ಮೃತರನ್ನು ಬಸಾಪುರ ಗ್ರಾಮದ ಪ್ರಮೀಳಾ ಶಶಿಧರ(35) ಹಾಗೂ ಹಿರೇ ಬಗನಾಳ ಗ್ರಾಮದ ಹನುಮಂತಪ್ಪ ಬಾಲಪ್ಪ ದೇವರಮನಿ(60) ಎಂದು ಗುರುತಿಸಲಾಗಿದೆ. ಇಬ್ಬರೂ ಲಘು ಪ್ರಯಾಣಿಕರ ವಾಹನದಲ್ಲಿದ್ದರು.
ಟಾಟಾ ಏಸ್ ಚಾಲಕ ರಾಜಾಹುಸೇನ್ ಹಿಟ್ನಾಳ ಸೇರಿದಂತೆ ಪರಶುರಾಮ ಶಹಾಪುರ, ರಾಮಪ್ಪ ಹಿಟ್ನಾಳ, ನಾಗರಾಜ ಹಿಟ್ನಾಳ ನಾಲ್ವರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
’ಲಘು ವಾಹನಗಳ ಚಾಲಕರ ನಿರ್ಲಕ್ಷವೇ ಘಟನೆಗೆ ಕಾರಣ’ ಎಂದು ಪ್ರಕರಣ ದಾಖಲಿಸಿರುವ ಮುನಿರಾಬಾದ್ ಪೊಲೀಸರು ತಿಳಿಸಿದ್ದಾರೆ.
ಅದೇ ಸಮಯಕ್ಕೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ಕಳಿಸಲು ನೆರವಾದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.