ಕೊಪ್ಪಳ: ಲಿಯೊನಾರ್ಡೊ ಡ ವಿಂಚಿ ಅರ್ಥಪೂರ್ಣ ಕಲಾಕೃತಿಗಳನ್ನು ಜಗತ್ತಿಗೆ ನೀಡಿದ ಮಹಾನ್ ಕಲಾವಿದ. ಅವರು ರಚಿಸಿದ ಹಲವಾರು ಕಲಾಕೃತಿಗಳಲ್ಲಿ ಮೊನಾಲಿಸಾ ಕಲಾಕೃತಿ ಜಗತ್ಪ್ರಸಿದ್ದ ಕಲಾಕೃತಿಯಾಗಿದೆ ಎಂದು ಹಂಪಿಯ ಹಿರಿಯ ಚಿತ್ರಕಲಾವಿದ ಕೆ.ಕೆ ಮಕಾಳೆ ತಿಳಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ವಿಶ್ವಕಲಾ ದಿನಾಚರಣೆ ಅಂಗವಾಗಿ ನಗರದ ಕಲಾಧಾಮ (ನಾಸವಾಲೆ ಕಾಂಪ್ಲೆಕ್ಸ್)ದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಚಿತ್ರ ಕಲಾವಿದರ ಕಲಾ ಪ್ರದರ್ಶನ ಹಾಗೂ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ದಲ್ಲಿ ಮಾತನಾಡಿದರು.
ಇಟಲಿ ದೇಶದಲ್ಲಿ ಜನಿಸಿದ ಡ ವಿಂಚಿ ನೈಜ ಹಾಗೂ ನವ್ಯ ಕಲಾಕೃತಿಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಲಲಿತ ಕಲೆಗಳು ಮನಸ್ಸಿಗೆ ಆನಂದ ನೀಡುವಲ್ಲಿ ಸಹಕಾರಿಯಾಗಿದೆ. ಲೋಕೋಪಯೋಗಿ ಕಲೆಗಳು ಮತ್ತು ಆತ್ಮಾನಂದ ಕಲಾಕೃತಿಗಳು ಸಮಾಜದ ಸೌಹಾರ್ದ ಹಾಗೂ ಸಮರಸದ ಸಹಬಾಳ್ವೆಗೆ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಲಾವಿದರಿಗೆ ಹಿಂದಿನ ಕಾಲದಲ್ಲಿ ಅಪಾರ ರಾಜಾಶ್ರಯ ನೀಡುತ್ತಿದ್ದರು. ಆದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮೂಲ ಕಲೆಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಸರ್ಕಾರ ಕಲೆಗೆ ಹಾಗೂ ಕಲಾವಿದರಿಗೆ ಮಾನ್ಯತೆ ನೀಡಬೇಕು. ಕೊಪ್ಪಳ ವಾತಾವರಣದಲ್ಲಿ ಕಲಾ ಪರಿಸರ ನಿರ್ಮಾಣ ಮಾಡಲು ಸದಾ ನಾನು ಸಹಕಾರ ನೀಡುತ್ತೇನೆ ಎಂದು ಅವರು ಹೇಳಿದರು.
ಲಿಯೊನಾರ್ಡೊ ಡ ವಿಂಚಿ ಇಳಿ ವಯಸ್ಸಿನಲ್ಲೂ ರೇಖೆ ವರ್ಣಗಳ ಸಮ್ಮೀಲನದಲ್ಲಿ ನಿರತರಾಗಿ ಜಗದ್ವಿಖ್ಯಾತಿಯಾದರು.
ಯುವ ಕಲಾವಿದರು ಸೀಮಿತವಾಗದೇ ಅಪಾರ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಮಾನವನ ಮನಸ್ಸಿಗೆ ಆನಂದ ನೀಡುವ ಕಲೆಯನ್ನು ಮೊದಲು ಕಲಾವಿದ ಆನಂದಿಸಿ ಅನುಭವಿಸಿದಾಗ ಮಾತ್ರ ಕಲಾವಿದ ಇನ್ನೊಬ್ಬರಿಗೆ ಆನಂದ ನೀಡಬಲ್ಲ ಎಂದರು.
ನಗರಸಭೆ ಸದಸ್ಯೆ ಲತಾಶ್ರೀ ಚಿನ್ನೂರು ಮಾತನಾಡಿ, ಕಲೆ ಹಾಗೂ ಕಲಾವಿದರ ಬೆಳವಣಿಗೆಗಾಗಿ ಸದಾ ಸಹಕಾರ ನೀಡುತ್ತೇವೆ. ಇಂತಹ ಕಲೆಗಳಿಂದ ಮಾನವೀಯ ಮೌಲ್ಯ ಹೆಚ್ಚುತ್ತದೆ. ಕಲಾವಿದರು, ಕಲಾ ಪೋಷಕರು ಕಲೆಯನ್ನು ಉಳಿಸಿ ಬೆಳೆಸೋಣ ಎಂದು ಅವರು ಹೇಳಿದರು.
ಹಿರಿಯ ಚಿತ್ರಕಲಾವಿದ ರಾಜು ತೇರದಾಳ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯರಾದ ಅನೀಸ್ ಫಾತಿಮಾ ಸ್ವಾಗತಿಸಿದರು. ಪ್ರವೀಣ ಗಾಯಕರ್ ನಿರೂಪಿಸಿದರು. ಗಂಗಾಧರ ಬಂಡಾನವರ ವಂದಿಸಿದರು.
ಕೆ.ಕೆ ಮಕಾಳೆ ಹಾಗೂ ದೇವೆಂದ್ರ ಹುಂಡಾ ಅವರಿಂದ ನಿಸರ್ಗದ ಕುರಿತು ಚಿತ್ರಕಲಾ ಪ್ರಾತ್ಯಕ್ಷಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವೀರಣ್ಣ ವಂಟಿಗೋಡಿಮಠ, ರಮೇಶ್ ಗಾರವಾಡ, ಗ್ಯಾನಪ್ಪ ವಾಲಿಕಾರ, ಚಿದಾನಂದ ಕಡೆಮನಿ, ಅಶೋಕ ವೆಂಕಟಾಪೂರ, ಮಹಾಂತೇಶ ಬೆಳ್ಳಿ, ಸುರೇಶ, ಸಂತೋಷ ಚಿತ್ರಗಾರ ಕಲಾವಿದರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.