ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ನೀರು ಕೊಡೋರು ಯಾರು?

ಬಳ್ಳಾರಿ ನಗರ ಕ್ಷೇತ್ರ: ದಶಕಗಳಾದರೂ ನೀಗದ ಬವಣೆಯ ನಡುವೆ ಮತ್ತೆ ಚುನಾವಣೆ
Last Updated 6 ಮೇ 2018, 7:25 IST
ಅಕ್ಷರ ಗಾತ್ರ

ಬಳ್ಳಾರಿ: ‘ನಾವೇನ್‌ ಚರಂಡಿ ನೀರ್‌ ಕುಡೀಬೇಕಾ?’ ಇಡೀ ರಾಜ್ಯದ ಗಮನ ಸೆಳೆದಿರುವ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಶಾಸಕ ಅನಿಲ್‌ ಎಚ್‌.ಲಾಡ್‌ ಕೆಲವು ದಿನಗಳ ಹಿಂದೆ ಬಿಸಿಲಹಳ್ಳಿಯಿಂದ ಪ್ರಚಾರ ಆರಂಭಿಸಿದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಹೀಗೆ ಕಿಡಿಕಾರಿದ್ದು ದೊಡ್ಡ ಸುದ್ದಿಯಾಗಿತ್ತು.

ನಗರದ ಒಳಗಿರುವ ಜನ ಹೀಗೆ ಶಾಸಕರನ್ನು ತರಾಟೆಗೆ ತೆಗೆದುಕೊಂಡ ನಿದರ್ಶನವಿಲ್ಲ. ಆದರೆ ‘ನೀರು ಪೂರೈಕೆಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಶಾಸಕರು ಗಮನ ಹರಿಸಲಿಲ್ಲ’ ಎಂದು ಬಹುತೇಕರು ದೂರುತ್ತಾರೆ.

ಚುನಾವಣೆ ಹತ್ತಿರ ಬಂದಂತೆ ಇದು ಅಸಮಾಧಾನದ ರೂಪ ತಾಳಿದೆ. ಅದಕ್ಕೆ ಇರುವ ಇನ್ನೊಂದು ಕಾರಣ, ‘ಐದು ವರ್ಷದಲ್ಲಿ ಲಾಡ್‌ ಜನರ ನಡುವೆ ಕಾಣಿಸಿಕೊಳ್ಳಲಿಲ್ಲ’ ಎಂಬ ದೂರು. ‘ಸಮಸ್ಯೆ ಪರಿಹರಿಸುವುದು ಬೇಡ, ಶಾಸಕರು ನಗರದಲ್ಲಿ ಇದ್ದಾರೆ ಎಂಬುದಾದರೂ ಗೊತ್ತಾಗಬೇಡವೇ’ ಎಂಬ ಅಳಲೂ ಉಂಟು.

‘ನಗರದಲ್ಲಿ ನಾನು ಇರಲೇಬೇಕಿಲ್ಲ. ಜನರ ಕೆಲಸವಾಗಬೇಕು ಅಷ್ಟೇ. ನನ್ನ ಬಳಿ ಸಾವಿರಾರು ಜನರ ಫೋನ್‌ ನಂಬರ್‌ಗಳಿವೆ. ಕೊಡ್ತೀನಿ. ನಾನೇನು ಮಾಡಿದ್ದೇನೆಂದು ಕೇಳಿಕೊಳ್ಳಿ’ ಎಂಬ ಉತ್ತರವನ್ನೂ ಎದುರಾಳಿಗಳಿಗೆ ಲಾಡ್‌ ನೀಡಿದ್ದಾಗಿದೆ. ಎರಡನೇ ಬಾರಿ ಸ್ಪರ್ಧಿಸಿರುವ ಅವರು ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ವಾಸ ಕಂಡಿರುವವರು.

ರೆಡ್ಡಿ ಕಣಕ್ಕೆ:
ಅಕ್ರಮ ಗಣಿಗಾರಿಕೆಯ ಆರೋಪದಲ್ಲಿ ಸಹೋದರ ಜಿ.ಜನಾರ್ದನರೆಡ್ಡಿ ಜೈಲು ವಾಸ ಕಂಡ ಕಾರಣಕ್ಕೆ, 2013ರ ಚುನಾವಣೆಯಿಂದ ದೂರ ಉಳಿದಿದ್ದ ಜಿ.ಸೋಮಶೇಖರ ರೆಡ್ಡಿ ಈ ಬಾರಿ ಬಿಜೆಪಿ ಅಭ್ಯರ್ಥಿ.

ಬೇಲ್‌ ಡೀಲ್‌ ಪ್ರಕರಣದಲ್ಲಿ ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಭ್ಯರ್ಥಿ ರೆಡ್ಡಿ ಕೂಡ ಜೈಲು ವಾಸ ಕಂಡವರು. 2008ರಲ್ಲಿ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ಮುಂದೊಡ್ಡಿ ಮತ ಯಾಚಿಸುತ್ತಿದ್ದಾರೆ. ಪಕ್ಷದ ಟಿಕೆಟ್‌ ಘೋಷಣೆಯಾಗುವ ಮುನ್ನವೇ ಪ್ರಚಾರ ಆರಂಭಿಸಿದ್ದರು.

‘ಈಗಲೂ ನನ್ನನ್ನು ಜನ ಶಾಸಕರೇ ಎಂದೇ ಕರೆಯುತ್ತಿದ್ದಾರೆ. ಆಗ ನಾನು ಮಾಡಿದ ಕೆಲಸ, ಏರ್ಪಡಿಸಿಕೊಂಡಿದ್ದ ಜನ ಸಂಪರ್ಕವೇ ಈ ಬಾರಿ ನನ್ನ ಕೈ ಹಿಡಿಯುತ್ತದೆ. ಆರೋಪಗಳಿಗೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅವರು ತಮ್ಮ ಇಷ್ಟದೈವ ಆಂಜನೇಯನಿಗೆ ಇದ್ದಲ್ಲೇ ಕೈಮುಗಿಯುತ್ತಾರೆ.

‘ಅಲ್ಪಸಂಖ್ಯಾತ’:
ಜನರ ನಡುವಿನ ಚರ್ಚೆಯಲ್ಲಿ ಚಾಲ್ತಿಯಲ್ಲಿರುವ ಲಾಡ್‌ ಮತ್ತು ರೆಡ್ಡಿ ನಡುವೆ, ಅಪರಿಚಿತರಾದ, ಜೆಡಿಎಸ್‌ಗೆ ‘ಆಪದ್ಬಾಂಧವ’ನಂತೆ ದೊರಕಿರುವ ಗಣಿ ಉದ್ಯಮಿ ಮಹ್ಮದ್‌ ಇಕ್ಬಾಲ್‌ ಹೊತುರ್‌ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.

ನಗರದಲ್ಲಿ ಎಂದೂ ನಡೆದಾಡಿ ಸಂಚರಿಸದ ಹೊತುರ್‌, ಈಗ ಬಿಸಿಲಿನಲ್ಲಿ ’ನವ ಬಳ್ಳಾರಿ ನಿರ್ಮಾಣಕ್ಕಾಗಿ ಸಂಕಲ್ಪ ಯಾತ್ರೆ’ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲೇ ‘ಅವರು ಇದುವರೆಗೆ ಏಕೆ ಜನರ ನಡುವೆ ಕಾಣಿಸಿಕೊಂಡಿರಲಿಲ್ಲ’ ಎಂಬ ಪ್ರಶ್ನೆಯೂ ಮೂಡಿದೆ.

ಕೊನೆ ಆರೋಪಿ:
ಅಕ್ರಮ ಗಣಿಕಾರಿಕೆಯ ಕೆಲವು ಪ್ರಕರಣಗಳಲ್ಲಿ ಜಿ.ಜನಾರ್ದನರೆಡ್ಡಿ ಮೊದಲ ಆರೋಪಿಯಾಗಿದ್ದರೆ, ಹೊತೂರ್‌ ಕೊನೆಯ ಆರೋಪಿ.

ಕಣದಲ್ಲಿರುವ ಮೂವರೂ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತವರೇ ಆಗಿರುವುದರಿಂದ ಯಾರೊಬ್ಬರೂ ಆ ಬಗ್ಗೆ ಮಾತನಾಡದೆ, ನಗರದ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ, ಮತದಾರರು ಅವರನ್ನು ಈ ಆರೋಪಗಳ ಬಗ್ಗೆ ಪ್ರಶ್ನಿಸಿದ ನಿದರ್ಶನವೂ ಇಲ್ಲ.

‘ಕನಿಷ್ಠ 2–3 ದಿನಕ್ಕೊಮ್ಮೆಯಾದರೂ ನೀರು ಪೂರೈಸಿದರೆ ಸಾಕು’ ಎನ್ನುವ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಆದರೆ ನೀರು ಕೊಡೋರು ಯಾರು ಎಂಬ ಪ್ರಶ್ನೆಗೆ ಹಲವು ಚುನಾವಣೆಗಳ ಬಳಿಕವೂ ಸಮಾಧಾನಕರ ಉತ್ತರ ದೊರಕಿಲ್ಲ.

ಲಾಡ್‌ ಮತ್ತು ರೆಡ್ಡಿ ಎರಡನೇ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇಬ್ಬರ ನಡುವೆ ಹೊತುರ್‌, ಜನ ತಮ್ಮ ಹೆಸರನ್ನು ನೆನಪಿಟ್ಟುಕೊಳ್ಳುವಂತೆ ಮಾಡುವ ಪ್ರಯತ್ನದಲ್ಲಿದ್ದಾರೆ. ಲಾಡ್‌ ಕುರಿತ ಅಸಮಾಧಾನ ಮತ್ತು ಅಲ್ಪಸಂಖ್ಯಾತರು ಎಂಬ ಜೆಡಿಎಸ್‌ನ ಅಸ್ತ್ರವೇ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ನಿಚ್ಚಳವಾಗಿದೆ.

‘ಮಗ್ಗುಲ ಮುಳ್ಳು’ ಟಪಾಲ್‌ ಗಣೇಶ್‌!

ಬಳ್ಳಾರಿ: ‘ಅಕ್ರಮ ಗಣಿಗಾರಿಕೆಯ ಆರೋಪಿಗಳಿಗೆ ಮತ ಹಾಕಬೇಡಿ’ ಎಂಬ ಅಸ್ತ್ರವನ್ನು ಲಾಡ್‌, ರೆಡ್ಡಿ ಮತ್ತು ಹೊತೂರ್ ಅವರ ವಿರುದ್ಧ ಪ್ರಯೋಗಿಸುತ್ತಿರುವ ಜೆಡಿಯು ಅಭ್ಯರ್ಥಿ ಟಪಾಲ್‌ ಗಣೇಶ್‌ ಮೂವರಿಗೂ ಮಗ್ಗುಲ ಮುಳ್ಳಾಗಿದ್ದಾರೆ.

ಇದು ಎಷ್ಟರ ಮಟ್ಟಿಗೆ ಪ್ರಭಾವ ಮತ್ತು ಪರಿಣಾಮ ಬೀರಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಜನರಿಗೆ ತಮ್ಮ ಸಮಸ್ಯೆಗಳ ಭಾರ ಇಳಿದರೆ ಸಾಕೆನಿಸಿದೆ.

ಮೂವರು ಘಟಾನುಘಟಿಗಳ ಎದುರು ಗೆಲುವು ಸುಲಭ ಸಾಧ್ಯವಲ್ಲ ಎಂಬ ಅರಿವು ಉಳ್ಳ ಗಣೇಶ್‌, ಭ್ರಷ್ಟಾಚಾರದ ವಿರುದ್ಧ ತಮ್ಮ ದನಿಯನ್ನು ಎಂದಿನಂತೆ ದಾಖಲಿಸುತ್ತಿದ್ದಾರೆ. ಆ ದೃಷ್ಟಿಯಿಂದ ಅವರು ಜನಪರ ಅಭ್ಯರ್ಥಿಯಂತೆ ಕಾಣುತ್ತಾರೆ.

ಆದರೆ, ರೆಡ್ಡಿ ಬಣದ ವಿರೋಧಿಯಾಗಿರುವುದರಿಂದ ಅವರೊಂದಿಗೆ ಗುರುತಿಸಿಕೊಂಡರೆ, ತಮಗೇನಾದರೂ ತೊಂದರೆಯಾಗಬಹುದು ಎಂಬ ಕಾರಣದಿಂದ ಜನ ಅವರ ಬಳಿಗೆ ಬರುತ್ತಿಲ್ಲ. ಇದು ಅವರೇ ಹೇಳುವ ಮಾತು.

ಅತ್ಯಧಿಕ ಸ್ಪರ್ಧಿಗಳಿರುವ ಕ್ಷೇತ್ರ

ಬಳ್ಳಾರಿ: ಇಡೀ ಜಿಲ್ಲೆಯಲ್ಲಿ ಅತ್ಯಧಿಕ ಸ್ಪರ್ಧಿಗಳಿರುವ ಕ್ಷೇತ್ರವಿದು. ವಿವಿಧ ಪಕ್ಷಗಳ 15 ಮಂದಿಯೊಂದಿಗೆ 13ಪಕ್ಷೇತರರು ಸ್ಪರ್ಧಿಸಿದ್ದಾರೆ. ಪೈಪೋಟಿ ವಿಷಯದಲ್ಲಿ ಪ್ರಮುಖ ಮೂರು ಪಕ್ಷಗಳು ಮಾತ್ರ ಮುಂಚೂಣಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT