ಗಂಗಾವತಿ: ಪೌರಕಾರ್ಮಿಕರ ಶ್ರಮದ ಕಾರಣ ನಗರಗಳು ಅಂದವಾಗಿದ್ದು, ಎಲ್ಲರೂ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಲೇಖಕ ಸಿ.ಎಚ್.ನಾರಿನಾಳ ತಿಳಿಸಿದರು.
ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದ ಸಮೀಪ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರ ಶ್ರಮದಿಂದ ಪಟ್ಟಣದಲ್ಲಿ ರೋಗರುಜಿನ ನಿಯಂತ್ರಣ ವಾಗುತ್ತಿದೆ. ಅವರು ಸ್ವಾಭಿಮಾನದ ಸಂಕೇತ. ಪೌರಕಾರ್ಮಿಕರ ಶ್ರಮದಿಂದಲೇ ನಾವೆಲ್ಲರೂ ಬದುಕಿನ ಬಂಡಿ ಸಾಗಿಸುತ್ತಿದ್ದೇವೆ ಎಂದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎನ್.ಸೂರಿಬಾಬು ಮಾತನಾಡಿ, ಕೋವಿಡ್ ವೇಳೆಯಲ್ಲಿ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ರೀತಿಯ ವೈಯಕ್ತಿಕ ಹಾಗೂ ಮಕ್ಕಳ ಶಿಕ್ಷಣದ ಕುರಿತು ಸಮಸ್ಯೆಗಳಿದ್ದರೆ, ಕೂಡಲೆ ಮಾಹಿತಿ ನೀಡಿದರೆ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಅಂಬಣ್ಣ ಅರೋಲಿಕರ್, ಭಾರದ್ವಾಜ್ ಅವರು ಪೌರ ಕಾರ್ಮಿಕರ ಸಮಸ್ಯೆಗಳು ಹಾಗೂ ಅವರಿಗೆ ಸರ್ಕಾರ ಒದಗಿಸಬೇಕಾದ ಸೌಲಭ್ಯಗಳು ಕುರಿತು ಮಾತನಾಡಿದರು. ಈ ವೇಳೆಯಲ್ಲಿ ಪೌರ ಕಾರ್ಮಿಕರ ಕುರಿತು ಬರೆದ ‘ಐಪಿಡಿ ಸಾಲಪ್ಪ ವರದಿ ಸಾರಾಂಶ’ ಹಾಗೂ ಕನಕಗಿರಿ ಅಲ್ಲಾಗಿರಿರಾಜ್ ಅವರು ರಚಿಸಿದ ‘ತುಂಡು ರೊಟ್ಟಿಯನ್ನಲ್ಲ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ನಗರದ ಸಿಬಿಎಸ್ ವೃತ್ತದಿಂದ ಶ್ರೀ ಕೃಷ್ಣ ದೇವರಾಯ ವೃತ್ತದವರೆಗೆ ರ್ಯಾಲಿ ನಡೆಸಲಾಯಿತು
ಮುಖಂಡರಾದ ಕ್ಲಿಪ್ಟನ್ ಡಿ. ರೋಜೋರಿಯೋ, ಎಚ್.ಎನ್ ಬಡಿಗೇರ, ದಾನಪ್ಪ, ಲಿಂಗಣ್ಣ ಜಂಗಮರಹಳ್ಳಿ, ಕೆಂಚಪ್ಪ ಹಿರೇಖೇಡ, ವಿರೇಶ, ಮೈಬೂಬ್, ಅಮೀರ್ ಅಲಿ, ರೇಣುಕಮ್ಮ, ಕವಿತಮ್ಮ, ಗಿಡ್ಡಪ್ಪ ಇದ್ದರು.