ಕುಷ್ಟಗಿ: ‘ಜನರು ಕೋವಿಡ್ ಮಾರ್ಗಸೂಚಿ ನಿರ್ಲಕ್ಷಿಸಬಾರದು. ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ತಾಲ್ಲೂಕಿನ ದೋಟಿಹಾಳ, ಕೇಸರೂರು, ಶಿರಗುಂಪಿ, ಜುಮಲಾಪುರ, ಕಿಲಾರಟ್ಟಿ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಕೋವಿಡ್ ಸಭೆ ನಡೆಸಿ ಜಾಗೃತಿ ಮೂಡಿಸಿದರು.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿಯೇ ತಜ್ಞರು ಎರಡನೇ ಅಲೆ ಅಪ್ಪಳಿಸಲಿದೆ ಎಂದು ಹೇಳಿದ್ದರು. ಈಗ ಅದು ನಿಜವಾಗಿದೆ. ಜನರ ನಿರ್ಲಕ್ಷ್ಯತನ ಮುಂದುವರಿದರೆ ಮುಂದಿನ ದಿನಗಳಲ್ಲಿ ಮೂರನೇ ಅಲೆಯೂ ವ್ಯಾಪಕವಾಗಿ ಹರಡಿ ಇಡೀ ಜನಸಮೂಹ ಕಷ್ಟಕ್ಕೀಡಾಗಬಹುದು ಎಂಬ ಅಪಾಯ ಇರುವ ಬಗ್ಗೆ ಈಗಲೂ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇಷ್ಟಾದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲವೆಂದರೆ ಇದಕ್ಕಿಂತ ದುರಂತ ಬೇರೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ತಮ್ಮ ಆರೋಗ್ಯ ಲೆಕ್ಕಿಸದೆ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಮಾಹಿತಿ ಪಡೆಯಲು ಮನೆಗಳಿಗೆ ಬಂದರೆ ದೂಷಿಸುವುದು, ಬೈದು ಕಳಿಸುತ್ತಿರುವುದು ಸರಿಯಲ್ಲ ಎಂದರು.