ಯಲಬುರ್ಗಾ: ‘ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಕೈಗೊಳ್ಳುವ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಹಕರಿಸಬೇಕು’ ಎಂದು ಪಿಎಸ್ಐ ಶಿವಕುಮಾರ ಮುಗ್ಗಳ್ಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ವಿವಿಧ ಕಾರಣಗಳಿಂದ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಅವುಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ತಿಳಿದೋ ಅಥವಾ ತಿಳಿಯದೋ ಆಗುವ ತಪ್ಪುಗಳಿಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಹಾಗೆಯೇ ದೈನಂದಿನ ಕಾನೂನಿನ ಅರಿವು ಮತ್ತು ಉತ್ತಮ ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡರೆ ಅಪರಾಧ ಕೃತ್ಯಗಳಿಂದ ದೂರ ಉಳಿಯಲು ಸಾಧ್ಯ’ ಎಂದು ಅವರು ಹೇಳಿದರು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದು, ವಾಹನಗಳ ದಾಖಲಾತಿಗಳನ್ನು ಸರಿಯಾಗಿಟ್ಟು ಕೊಳ್ಳುವುದು, ಮನೆಗಳಿಗೆ ರಕ್ಷಣೆ ಒದಗಿಸುವ ಕುರಿತು ಪೊಲೀಸರ ಗಮನಕ್ಕೆ ತರುವುದು ಸೇರಿದಂತೆ ವಿವಿಧ ಅಗತ್ಯತೆಗಳ ಕುರಿತು ಸಾರ್ವಜನಿಕರು ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಅವರು ಹೇಳಿದರು.
ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲಿ, ಕಲ್ಲಪ್ಪ ಕರಮುಡಿ, ಪ್ರಕಾಶ ಛಲವಾದಿ, ವಿಜಯ ಜಕ್ಕಲಿ, ಸಿರಾಜ್, ಸುರೇಶ ಛಲವಾದಿ, ಮುತ್ತು ಬಳಿಗಾರ, ಲಕ್ಷ್ಮಣ, ಗುರುರಾಜ್ ರಾಮಶೆಟ್ಟಿ, ಶಿವಕುಮಾರ ಭಾವಿಮನಿ, ಫರೀದ್ ಎಲಿಗಾರ, ಮಹಾಂತೇಶ, ಶಂಕರ್ ಬಣಕಾರ್ ಹಾಗೂ ಪ್ರಕಾಶ ಉಗ್ರಾಣಿ ಇದ್ದರು.